ದಶಕದಿಂದ ಟಾರ್ಪಾಲಿನ್ ಸೂರಡಿ ಇರುವ ಸಾಂತು ಅಜ್ಜಿ ಬದುಕು ಬೆಳಕು ಕಂಡೀತೆ?
Recommended Video
ಸಾಂತು ಬಾಯಿ ಅಜ್ಜಿ ಈಗ ಬಹಳ ಖ್ಯಾತಿ ಪಡೆದಿದ್ದಾಳೆ. ಅದಕ್ಕೆ ಇರುವ ಕಾರಣ ಮಾತ್ರ ತಲೆ ತಗ್ಗಿಸುವಂಥದ್ದು ಅನ್ನೋದೇ ಬೇಸರದ ವಿಷಯ. ಏಕೆಂದರೆ, ಒಂದಲ್ಲ- ಎರಡಲ್ಲ ಹತ್ತು ವರ್ಷಗಳಿಂದ ಟಾರ್ಪಾಲಿನ್ ನ ಗೂಡಿನಲ್ಲಿ ಈ ಅಜ್ಜಿ ಬದುಕುತ್ತಿದ್ದಾರೆ. ಈ ವೃದ್ಧೆಗೆ ಆಸರೆಯಾಗಿರುವ ಇನ್ನೊಂದು ಜೀವ ಆಕೆಯ ಮೊಮ್ಮಗಳು.
ಕಾಡಿನ ಮಧ್ಯೆ ಬದುಕುತ್ತಿರುವ ಬಡ ಅಜ್ಜಿಯ ಈ ಟಾರ್ಪಾಲಿನ್ ಸೂರು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ ಅಜ್ಜಿಯ ಈ ಗುಡಿಸಲು ಇರೋದು ಕುಂದಾಪುರ ತಾಲೂಕಿನ ಶಂಕರ್ ನಾರಾಯಣದ ಕುಳ್ಳುಂಜೆಯ ಎಂಬ ಕುಗ್ರಾಮದ ಮಾಯಿನ ಕೊಡ್ಲು ಎಂಬಲ್ಲಿ.
ಥೇಟ್ ಕೋಳಿ ಗೂಡಿನಂತೆ ಕಾಣುವ ಈ ಗುಡಿಸಲೇ ಸಾಂತು ಬಾಯಿ ಅಜ್ಜಿಯ ಪಾಲಿಗೆ ಅರಮನೆ.ಇದೇ ಗೂಡಿನಲ್ಲಿ ಸಾಂತು ಬಾಯಿ ತನ್ನ ಮಗಳೂ ಹಾಗೂ ಮೊಮ್ಮಗಳ ಜೊತೆ ಜೀವನ ಕಳೆಯುತ್ತಿದ್ದಾಳೆ. ಕುಡುಬಿ ಜನಾಂಗದ ಸಾಂತು ಬಾಯಿಗೆ ಒಬ್ಬ ಮಗನಿದ್ದಾನೆ. ಆದರೆ ಆತ ಕುಟುಂಬದ ಭಾರ ಹೊರುವುದಕ್ಕೆ ಶಕ್ತನಲ್ಲ.
ಟಾರ್ಪಾಲಿನ್ ಹೊದಿಕೆ, ಚಿಮಣಿ ದೀಪವೇ ಗಟ್ಟಿ
ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ಗುಡಿಸಲಿಗೆ ಹರಿದ ಪ್ಲಾಸ್ಟಿಕ್ ಟಾರ್ಪಾಲಿನ್ ಹೊದಿಕೆ ಮಾಡಲಾಗಿದೆ. ಚಿಮಣಿ ದೀಪವೇ ಸದ್ಯ ಬೆಳಕಿನ ಆಸರೆ. ಗುಡಿಸಲಿಗೆ ಹೋಗುವುದಕ್ಕೆ ಸರಿಯಾದ ದಾರಿಯೂ ಇಲ್ಲದೇ, ಮೂಲಸೌಲಭ್ಯ ಗಾಳಿಯೂ ಸೋಕದೆ ಈ ಕುಟುಂಬ ನರಳುತ್ತಿದೆ. ನಮಗೂ ಒಂದು ಬೆಚ್ಚನೆ ಸೂರು ಕೊಡಿ ಅನ್ನುವುದು ಈ ಅಜ್ಜಿಯ ಕುಟುಂಬದ ಬೇಡಿಕೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಾಂತು ಬಾಯಿ ಕುಟುಂಬಕ್ಕೆ ನೆರವಾಗಿ ಎಂಬ ಬೇಡಿಕೆಯೊಂದಿಗೆ ಇರುವ ಗುಡಿಸಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು. ಉಮೇಶ್ ಶೆಟ್ಟಿ ಎಂಬ ಜನಪ್ರತಿನಿಧಿಯೊಬ್ಬರು ಈ ಅಜ್ಜಿಗೆ ನೆರವು ಸಿಗಲಿ ಎಂದು ಸಾಮಾಜಿಕ ಜಾಲತಾಣಕ್ಕೆ ಮೊರೆ ಹೋಗಿದ್ದಾರೆ.ಇದೀಗ ಹಲವು ಮಂದಿ ಅಜ್ಜಿಯ ಕಷ್ಟಕ್ಕೆ ನೆರವಿಗೆ ಮುಂದಾಗಿದ್ದಾರೆ.
ಮನೆ ನಿರ್ಮಾಣಕ್ಕೆ ಹಣ ನೀಡಲು ಗ್ರಾ.ಪಂ. ಸಿದ್ಧ
ಸಾಂತು ಬಾಯಿಗೆ ಮನೆ ನಿರ್ಮಾಣಕ್ಕಾಗಿ ಆಶ್ರಯ ಯೋಜನೆ ಹಣ ನೀಡುವುದಕ್ಕೆ ಗ್ರಾಮ ಪಂಚಾಯಿತಿ ಕೂಡ ಮುಂದಾಗಿದೆ. ಆದರೆ ಸರಕಾರದ ಕಾನೂನು ಪ್ರಕಾರ ಹಂತ ಹಂತವಾಗಿ ಮನೆ ನಿರ್ಮಾಣ ಮಾಡುವುದಕ್ಕೆ ಅಜ್ಜಿ ಕೈಯಲ್ಲಿ ಪುಡಿಗಾಸಿಲ್ಲ. ಹಾಗಾಗಿ ಅಜ್ಜಿಯ ಬಡಕುಟುಂಬ ಸೋತು ಗುಡಿಸಲಿನಲ್ಲೇ ದಿನ ಕಳೆಯುವಂತಾಗಿದೆ.
ಯೋಜನೆಯಲ್ಲಿ ಮಾರ್ಪಾಟಾದರೂ ಮಾಡಲಿ
ನಾಗರಿಕ ಪ್ರಪಂಚದ ಗೌಜು- ಗದ್ದಲದ ನಡುವೆ ಸಾಂತು ಬಾಯಿ ಕುಟುಂಬ ಬಡತನದ ಬಿರುಗಾಳಿ ಸಿಕ್ಕಿ ಬದುಕು ನಡೆಸುತ್ತಿದೆ. ಸಾಂತು ಬಾಯಿಯಂತೆ ಸಾಕಷ್ಟು ಜನ ಬಡವರನ್ನು ಸರಕಾರದ ಯೋಜನೆಗಳು ಈ ವರೆಗೂ ತಲುಪಿಲ್ಲ. ಇಂತಹ ಸ್ಥಿತಿಯಲ್ಲಿರುವ ನಿರ್ಗತಿಕರಿಗೆ ಸರಕಾರವೇ ಮನೆ ಕಟ್ಟಿಕೊಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿದೆ.