ಹಿಂಜಾವೇ ಕಾರ್ಯಕರ್ತರಿಂದ ಪಡುಬಿದ್ರೆ ಪೊಲೀಸ್ ಠಾಣೆಗೆ ಮುತ್ತಿಗೆ
ಪಡುಬಿದ್ರೆ, ಫೆಬ್ರವರಿ. 27 : ಇತ್ತೀಚೆಗೆ ಉಡುಪಿ ಮುದರಂಗಡಿಯ ಮುಖ್ಯ ರಸ್ತೆಯಲ್ಲಿ ಟೆಂಪೊ ಚಾಲಕ ಭಾಸ್ಕರ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕೆಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಾನುವಾರ ರಾತ್ರಿ ಪಡುಬಿದ್ರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.
ಘಟನೆ ವಿವರ : ಉಡುಪಿ ಮುದರಂಗಡಿಯ ಮುಖ್ಯ ರಸ್ತೆಯಲ್ಲಿ ಸಂಚರಿಸುತಿದ್ದ ಟೆಂಪೊ ಚಾಲಕ ಓವರ್ಟೇಕ್ ಮಾಡಿ ಹಾರ್ನ್ ಮಾಡಿರುವುದನ್ನು ಬೈಕ್ ಸವಾರ ಹಾರಿಸ್ ಎಂಬವರು ಪ್ರಶ್ನಿಸಿದ್ದ.

ಬಳಿಕ ಟೆಂಪೊ ಚಾಲಕ ಹಾಗೂ ಹಾರಿಸ್ ಮಧ್ಯೆ ಮಾತಿನ ಚಕಮಕಿ ನಡುವೆ ಹಾರಿಸ್ ಟೆಂಪೊ ಚಾಲಕ ಭಾಸ್ಕರ್ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಉಡಪಿಯ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾರಿಸ್ ಕ್ಷಮೆ ಕೇಳುವ ಮೂಲಕ ರಾಜಿ ಸಂಧಾನದೊಂದಿಗೆ ಸುಖಾಂತ್ಯ ಕಂಡಿತ್ತು.
ಆದರೂ ಭಾನುವಾರ ಸಂಜೆ ಪಡುಬಿದ್ರೆ ಠಾಣೆಯಲ್ಲಿ ಸುಮಾರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಭಾಸ್ಕರ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕು ಎಂದು ಪಟ್ಟುಹಿಡಿದರು.
ಈ ವೇಳೆ ಪೊಲೀಸರು ಮತ್ತು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, ಪ್ರಕರಣ ದಾಖಲಿಸದೆ ಬಂಧಿಸಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದರೂ ಕಾರ್ಯಕರ್ತರು ಅವರ ಮಾತನ್ನು ಕೇಳದೆ ಕೂಡಲೇ ಬಂಧಿಸುವಂತೆ ಪಟ್ಟುಹಿಡಿದರು.
ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಸಹಿತ ಪ್ರತಿಭಟನಾಕಾರನ್ನು ಮನವೊಳಿಸಲು ಯತ್ನಿಸಿದರು. ಅಲ್ಲದೆ ರಾಜಕೀಯ ನಾಯಕರು ಈ ವಿಷಯಕ್ಕೆ ಮೂಗು ತೂರಿಸುವುದು ಬೇಡ ಎಂದು ಪ್ರಕಾಶ್ ಶೆಟ್ಟಿ ಅವರ ವಿರುದ್ಧ ಪ್ರತಿಭಟನೆಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಕಾಪು ಸರ್ಕಲ್ ಹಾಲಮೂರ್ತಿ, ಪಡುಬಿದ್ರೆ ಎಸ್ ಐ ಸತೀಶ್ ಸಂಧಾನ ಮಾಡಲು ಯತ್ನಿಸಿದರೂ ಇದಕ್ಕೂ ಜಗ್ಗದ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಎಎಸ್ಪಿ ವಿಷ್ಣುವರ್ಧನ್ ಪರಿಸ್ಥಿತಿ ತಿಳಿಗೊಳಿಸಿದರು.












Click it and Unblock the Notifications