ಉಡುಪಿಯಲ್ಲಿ ಧಾರಾಕಾರ ಮಳೆ: ನೂರಕ್ಕೂ ಹೆಚ್ಚು ಮನೆ ಮುಳುಗಡೆ, 2 ದಿನ ಶಾಲಾ ಕಾಲೇಜಿಗೆ ರಜೆ
ಉಡುಪಿ, ಜುಲೈ 7: ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಎಡೆಬಿಡದೆ ಸುರಿಯುವ ಮಳೆ ಹಲವು ಅವಾಂತರಳನ್ನು ಸೃಷ್ಠಿ ಮಾಡಿದೆ. ಅಲ್ಲದೆ ರಾಜ್ಯ ಹವಾಮಾನ ಇಲಾಖೆ ಜುಲೈ 9 ನೇ ತಾರೀಕು ಬೆಳಗ್ಗೆ 8 ಗಂಟೆ ತನಕ ಮಳೆ ಮುಂದುವರಿಯುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಹಲವು ಅನಾಹುತವನ್ನು ಸೃಷ್ಟಿ ಮಾಡಿದ್ದು,ಉಡುಪಿಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸುಮಾರು ನೂರಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ.
ಪುನರ್ವಸು ಮಳೆ ಅಬ್ಬರಕ್ಕೆ ಕೊಡಗಿನಲ್ಲಿ ಆರೆಂಜ್ ಆಲರ್ಟ್
ಸೌಪರ್ಣಿಕಾ ನದಿ ಮೈ ತುಂಬಿ ಹರಿಯುತ್ತಿದ್ದು,ನದಿ ದಡದಲ್ಲಿರುವ ಬೈಂದೂರಿನ ನಾವುಂದ ಗ್ರಾಮದ ನೂರು ಮನೆಗಳು ಜಲಾವೃತವಾಗಿದೆ. ನದಿ ನೀರು ಗ್ರಾಮಕ್ಕೆ ನುಗ್ಗಿದ್ದು ಗ್ರಾಮದ ಪ್ರಾಣಿ, ಜಾನುವಾರು ರಕ್ಷಿಸಲು ಜನ ಹರಸಾಹಸ ಪಟ್ಟಿದ್ದಾರೆ. ಕೊಲ್ಲೂರು ಭಾಗದಿಂದ ಹರಿದುಬರುವ ಸೌಪರ್ಣಿಕಾ ನದಿಯಲ್ಲಿ ನೀರಿನ ಪ್ರಮಾಣ ಅತೀ ಹೆಚ್ಚಾದ ಹಿನ್ನಲೆಯಲ್ಲಿ ನಾವುಂದದ ಸಾಲ್ಬುಡ ಹಾಗೂ ಕದ್ರು ಭಾಗದಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಕಳೆದ ಎಂಟು ವರ್ಷಗಳಿಂದ ಜನ ನೆರೆ ಆತಂಕ ಎದುರಿಸುತ್ತಿದ್ದು,ನದಿಗೆ ತಡೆಗೋಡೆ ಕಟ್ಟಿದರೆ ನೆರೆ ಭೀತಿ ತಪ್ಪಬಹುದು. ಆದರೆ ಈ ಬಗ್ಗೆ ಎಷ್ಟೇ ಮನವಿ ನೀಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಘಟ್ಟ ಭಾಗದಲ್ಲಿ ಎಡೆಬಿಡದೆ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನದಿಯಲ್ಲಿ ನೀರಿನ ಹರಿವಿನ ಮಟ್ಟವೂ ಏರಿಕೆಯಾಗಿದೆ. ನಾವುಂದ ಗ್ರಾಮದಲ್ಲಿ ನೆರೆ ನೀರು ವ್ಯಾಪಕವಾಗಿ ನುಗ್ಗಿದ್ದು, ಎನ್ಡಿಆರ್ಎಫ್ ತಂಡ ಗ್ರಾಮದ ಜನರ ರಕ್ಷಣೆಯನ್ನು ಮಾಡಿದೆ. ಬೋಟ್ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಿದೆ.. ಜಾನುವಾರು, ಸಾಕುಪ್ರಾಣಿಗಳು ನೆರೆಗೆ ತುತ್ತಾಗಿದ್ದು, ಗ್ರಾಮದ ಜನ ಜೀವದ ಹಂಗು ತೊರೆದು ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ. ನೆರೆ ನೀರು ಇಳಿದ ಬಳಿಕ ಮತ್ತೆ ಪ್ರಾಣಿಗಳನ್ನು ತಮ್ಮ ಗ್ರಾಮಕ್ಕೆ ಕರೆದೊಯ್ಯಲು ಜನ ಚಿಂತನೆ ಮಾಡಿದ್ದಾರೆ.
ಸೌಪರ್ಣಿಕಾ ನದಿ ಉಕ್ಕಿ ಹರಿಯಲು ಅಣೆಕಟ್ಟು ಕಾಮಗಾರಿ ತಡವಾಗಿ ಆಗಿದ್ದೇ ಕಾರಣ ಅಂತಾ ಗ್ರಾಮಸ್ಥರು ದೂರಿದ್ದಾರೆ. ನದಿಗೆ ತಡೆಗೋಡೆ ಕಟ್ಟಿಲ್ಲ. ಬಂಟ್ವಾಡಿ ಅಣೆಕಟ್ಟು ಕಾಮಗಾರಿ ಕೂಡಾ ಸ್ಥಗಿತವಾಗಿದೆ. ಹೀಗಾಗಿ ನದಿ ನೀರು ಸರಾಗವಾಗಿ ಹರಿಯಲು ಆಗದೇ ಸಮಸ್ಯೆ ಉಂಟಾಗಿದೆ ಅಂತಾ ಜನ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 9ರವರೆಗೆ ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಣೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಮಾಡಿದ್ದಾರೆ.