ಕರಾವಳಿಯ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ಮಾಸ್ಟರ್ ಪ್ಲಾನ್:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರಾವಳಿ ಭಾಗದ ಸಾಂಸ್ಕೃತಿಕ, ದೇಗುಲ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಲಿದೆ. ಕರಾವಳಿಯ ಆರ್ಥಿಕತೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಉಡುಪಿ, ಜನವರಿ 27: ಕರಾವಳಿ ಭಾಗದ ಸಾಂಸ್ಕೃತಿಕ, ದೇಗುಲ ಪ್ರವಾಸೋದ್ಯಮಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಲಿದೆ. ಕರಾವಳಿಯ ಆರ್ಥಿಕತೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಜಿಲ್ಲೆಯ ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಿರುವ ಪರಶುರಾಮನ ಮೂರ್ತಿ ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಸೊದ್ಯಮಕ್ಕೆ ವಿಪುಲ ಅವಕಾಶಗಳು ಇವೆ. ಪ್ರವಾಸೋದ್ಯಮಕ್ಕೆ ಈಗಾಗಲೇ ಸಾಕಷ್ಟು ಯೋಜನಗಳನ್ನು ರೂಪಿಸಲಾಗಿದೆ. ಇಲ್ಲಿಯವರ ಜೀವನ ಹಸನಾಗಲು ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೋದ್ಯಮದ ಅಗತ್ಯವೂ ಇದೆ ಎಂದರು.
ಇಲ್ಲಿ ಕೈಗಾರಿಕೋದ್ಯಮಕ್ಕೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಬಂದರು, ಲಾಜಿಸ್ಟಿಕ್ ಪಾರ್ಕ್, ರಸ್ತೆ ಸಂಪರ್ಕ ಆದಾಗ ಸಮಗ್ರ ಅಭಿವೃದ್ಧಿಯಾಗುತ್ತದೆ. ಈಗಾಗಲೇ ಕರಾವಳಿಯಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇಂಧನ, ಹೈಡ್ರೋಜನ್, ಅಮೋನಿಯಾ ಉತ್ಪಾದನೆಗೆ ಜನ ಮುಂದಾಗಿದ್ದಾರೆ. ಇದನ್ನು ಆದಷ್ಟು ಶೀಘ್ರವಾಗಿ ನನಸು ಮಾಡಿದರೆ, ಇಲ್ಲಿನ ಜನರ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಇಲ್ಲಿನ ಬಂದರುಗಳ ಸಾಮರ್ಥ್ಯ ಹೆಚ್ಚಾಗಬೇಕು. ಹೂಡಿಕೆ ಹೆಚ್ಚಾದರೆ, ದೊಡ್ಡ ಪ್ರಾಮಾಣದ ಆರ್ಥಿಕ ಚಟುವಟಿಕೆಗಳು ನಡೆದು ಅಭಿವೃದ್ಧಿಯಾಗುತ್ತದೆ ಎಂದು ಅವರು ವಿವರಿಸಿದರು.

ಪರಶುರಾಮ ತುಳುನಾಡ ಸೃಷ್ಟಿಕರ್ತ
ಪರಶುರಾಮನ ಥೀಮ್ ಪಾರ್ಕ್ ಹಾಗೂ ಅತ್ಯಂತ ಎತ್ತರದ ಸ್ಥಾನದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆಯಾಗಿ ಉದ್ಘಾಟನೆಗೊಂಡಿದೆ. ಹೀಗಾಗಿ ಕರಾವಳಿಗೆ ಇಂದು ಐತಿಹಾಸ ದಿನ. ಪರಶುರಾಮ ಸೃಷ್ಟಿಕರ್ತನ ಪ್ರಮುಖ ಅಂಗ. ಕರ್ಣನ ವ್ಯಕ್ತಿತ್ವದಂತೆಯೇ ಪರಶುರಾಮನ ವ್ಯಕ್ತಿತ್ವವೂ ಹೌದು. ಇಂದು ತುಳುನಾಡು, ಕರಾವಳಿಗೆ ಸೇರಿದವರು ಪರಶುರಾಮನನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು.
ಪರಶುರಾಮನ ಕುರುಹಳಿದ್ದರೆ ಮುಂದಿನ ಜನಾಂಗಕ್ಕೆ ಆತನ ಕಥೆ ತಿಳಿಯುತ್ತದೆ. ಪರಶುರಾಮನ ಸಣ್ಣ ದೇವಸ್ಥಾನ ಕರಾವಳಿಯಲ್ಲಿದೆ. ಪುರಾಣಕ್ಕೆ ಐತಿಹಾಸಿಕ ಸಾಕ್ಷಿ ಇಂದು ದೊರೆತಿದೆ. ಸಾರ್ವಜನಿಕ ಜೀವನದಲ್ಲಿ ಹತ್ತು ಹಲವು ಕೆಲಸಗಳನ್ನು ಮಾಡುತ್ತೇವೆ. ಆದರೆ ಈ ರೀತಿ ಐತಿಹಾಸಿಕ ಕೆಲಸಗಳನ್ನು ಮಾಡಲು ಸಿಗುವ ಸಂದರ್ಭಗಳು ವಿರಳ. ಸಿಕ್ಕಂತಹ ಸಂದರ್ಭದಲ್ಲಿ ಅದನ್ನು ಮಾಡುವುದೇ ನಿಜವಾದ ಜನಸೇವಕ ಕೆಲಸ.
ಪರಶುರಾಮನ ಇಲ್ಲಿಗೆ ಭಕ್ತನಾಗಿ ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು, ಸವದತ್ತಿಯಲ್ಲಿ ಪರಶುರಾಮ ದೇವಾಲವನ್ನು ದೊಡ್ಡ ಪ್ರಮಾನದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್, ಮೀನುಗಾರಿಕೆ ಸಚಿವ ಎಸ್.ಅಂಗಾರ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್. ರಘುಪತಿ ಭಟ್, ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಉಪಸ್ಥಿತರಿದ್ದರು.












Click it and Unblock the Notifications