ಪಿಸ್ತೂಲು ತೋರಿಸಿ ರೈಲಿನಲ್ಲಿ ನಾಲ್ಕು ಕೆ.ಜಿ. ಚಿನ್ನ ದೋಚಿ ಪರಾರಿ
ಉಡುಪಿ, ಸೆಪ್ಟೆಂಬರ್ 18 : ರೈಲಿನಲ್ಲಿ ಚಿನ್ನದ ವ್ಯಾಪಾರಿಯೊಬ್ಬರಿಗೆ ದುಷ್ಕರ್ಮಿಗಳ ತಂಡ ಪಿಸ್ತೂಲು ತೋರಿಸಿ, ಅಪಾರ ಪ್ರಮಾಣದ ಚಿನ್ನವನ್ನು ಕಸಿದು ಪರಾರಿಯಾದ ಘಟನೆ ಉಡುಪಿ ಹೊರವಲಯದ ಕಾಪು ಎಂಬಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುಂಬಯಿ- ತಿರುವನಂತಪುರ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮುಂಬಯಿಯ ಆಭರಣ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಸಿಂಗ್ ರೈಲಿನ ಎಸ್ 7 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಕಾಪು ತಲುಪುತ್ತಿದ್ದಂತೆ ದುಷ್ಕರ್ಮಿಗಳ ತಂಡ ರಾಜೇಂದ್ರ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದೆ.
ಉಡುಪಿ: ವೃದ್ಧ ಅತ್ತೆ-ಮಾವನನ್ನು ಮನಬಂದಂತೆ ಥಳಿಸಿದ ಸೊಸೆ
ಈ ಸಂದರ್ಭದಲ್ಲಿ ಚಾಕು ಹಾಗೂ ಪಿಸ್ತೂಲ್ ತೋರಿಸಿದ ದುಷ್ಕರ್ಮಿಗಳ ತಂಡ ರಾಜೇಂದ್ರ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಸಿದೆ. ಆ ನಂತರ ರಾಜೇಂದ್ರ ಸಿಂಗ್ ಅವರ ಬಳಿಯಿದ್ದ 4.11 ಕಿಲೋ ಗ್ರಾಂ ಚಿನ್ನದ ಬಳೆಗಳನ್ನು ಕಸಿದುಕೊಂಡಿದೆ.
ಕಾಪುವಿನಲ್ಲಿ ಚಿನ್ನಾಭರಣ ಲೂಟಿ ಮಾಡಿದ ದುಷ್ಕರ್ಮಿಗಳ ತಂಡವು ಮಂಗಳೂರು ಹೊರವಲಯದ ಸುರತ್ಕಲ್ ನಿಲ್ದಾಣ ತಲಪುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗಿದೆ.
ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕಾರ್ಕಳದ ಎಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಪೊಲೀಸ್ ಅಧಿಕಾರಿಗಳ 3 ತಂಡ ರಚಿಸಲಾಗಿದೆ.