ಭಾರೀ ಚರ್ಚೆಗೆ ಗ್ರಾಸವಾದ ಜಯಪ್ರಕಾಶ್ ಹೆಗ್ಡೆ ಮತ್ತು ಆಸ್ಕರ್ ಫೆರ್ನಾಂಡೀಸ್ ಚುನಾವಣೆ ಪೂರ್ವ ಭೇಟಿ
ಉಡುಪಿ, ಫೆಬ್ರವರಿ 26: ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ ಮತ್ತು ಆಸ್ಕರ್ ಫೆರ್ನಾಂಡೀಸ್ ಚುನಾವಣೆ ಪೂರ್ವ ಭೇಟಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮಹತ್ವಪೂರ್ಣ ಭೇಟಿ ಕುರಿತು ವಿಮರ್ಶೆಗಳು, ಗಾಳಿ ಸುದ್ದಿಗಳು ಹರಡತೊಡಗಿವೆ.
ಮಾಜಿ ಸಂಸದ ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಜಯಪ್ರಕಾಶ ಹೆಗ್ಡೆ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲ ತೀರ್ವ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಇದು ಉಭಯ ನಾಯಕರ ಪ್ರಥಮ ಭೇಟಿಯಾಗಿದೆ. ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ಆರು ವರ್ಷದವರೆಗೆ ಹೊರ ಹಾಕಲ್ಪಟ್ಟ ಜಯಪ್ರಕಾಶ ಹೆಗ್ಡೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಆಸ್ಕರ್ ಫೆರ್ನಾಂಡೀಸ್ ಅವರನ್ನು ಭೇಟಿಯಾಗಿದ್ದಾರೆ.

ಆಸ್ಕರ್ ಫೆರ್ನಾಂಡೀಸ್ ಭೇಟಿ ಸಂದರ್ಭದಲ್ಲಿ ಬಿಲ್ಲವ ನಾಯಕ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಇದ್ದರು. ಕಾಂಗ್ರೆಸ್ ನಿಂದ ಬಿಜೆಪಿ ಕಡೆಗೆ ಪಕ್ಷಾಂತರಗೊಂಡ ಹೆಗ್ಡೆಯವರಿಗೆ ಬಿಜೆಪಿಯಿಂದ ಟೆಕೆಟ್ ಸಿಗವುದು ಅನುಮಾನವಾಗಿರುವುದರಿಂದ ಈ ಭೇಟಿ ಮಹತ್ವಪೂರ್ಣವೆನಿಸಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಅನೇಕ ಪ್ರಬಲ ಆಕಾಂಕ್ಷಿಗಳಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದೆಂಬ ಕೂಗು ಬಲಗೊಳ್ಳುತ್ತಿದೆ. ಈ ನಡುವೆ ಶೋಭಾ ಕರಂದ್ಲಾಜೆ ತನ್ನ ವಿರೋಧಿಗಳಿಗೆ ಸೆಡ್ಡು ಹೊಡೆದು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ದತೆ ನಡೆಸುತ್ತಿದ್ದಾರೆ.
ಈ ನಡುವೆ ಜಯಪ್ರಕಾಶ ಹೆಗ್ಡೆ ಮತ್ತು ಆಸ್ಕರ್ ಫೆರ್ನಾಂಡೀಸ್ ಪರಸ್ಪರ ಭೇಟಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ನಡುವೆ ಜೆಡಿಎಸ್ ಕಡೆಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಅವರು ಸ್ಪರ್ಧಿಸಲಿರುವರೆಂದೂ ದೇವೇಗೌಡರೊಂದಿಗೆ ಮಾತುಕತೆ ಆಗಿದೆಯೆಂದು ವದಂತಿ ಕೂಡ ಹಬ್ಬಿದೆ.












Click it and Unblock the Notifications