ಮಂಗಳೂರಿನ ಮೀನು ವ್ಯಾಪಾರಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಉಡುಪಿ, ಜೂನ್ 7: ಉಡುಪಿಯ ಮಲ್ಪೆ ಬಂದರಿನಲ್ಲಿ ಮಂಗಳೂರಿನ ಮೀನು ವ್ಯಾಪಾರಿಯೊಬ್ಬರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮುಸುಕುಧಾರಿ ದುಷ್ಕರ್ಮಿಗಳ ತಂಡ ಮಂಗಳೂರಿನ ಮೀನು ವ್ಯಾಪಾರಿ ರಿಯಾಜ್( 32) ಎಂಬುವರ ಮೇಲೆ ದಾಳಿ ನಡೆಸಿದೆ.
ಮಂಗಳೂರಿನ ಫರಂಗಿಪೇಟೆ ನಿವಾಸಿ ರಿಯಾಜ್ ಮಲ್ಪೆಯಲ್ಲಿ ಮೀನು ಖರೀದಿಸಿ ಮಾರಾಟ ಮಾಡಲು ಇಂದು ಮುಂಜಾನೆ ಇತರ ಮೂವರೊಂದಿಗೆ ಎಂದಿನಂತೆ ತನ್ನ ಪಿಕಪ್ ವಾಹನದಲ್ಲಿ ಉಡುಪಿ ಮಲ್ಪೆ ಮೀನುಗಾರಿಕಾ ಬಂದರಿಗೆ ಆಗಮಿಸಿದ್ದರು.
ಬಂದರಿನೊಳಗೆ ತಮ್ಮ ವಾಹನ ನಿಲ್ಲಿಸಿ, ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದರು. ರಿಯಾಜ್ ಅದೇ ವಾಹನದಲ್ಲಿ ನಿದ್ರೆಗೆ ಜಾರಿದ್ದರು. ಈ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಕೊಂಡು ಬಂದಿದ್ದ ಕಾರಿನಲ್ಲಿದ್ದ ನಾಲ್ವರು ರಿಯಾಜ್ ಮೇಲೆ ಏಕಾಏಕಿ ಮಾರಕಾಸ್ರ್ತಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಶಬ್ದ ಕೇಳಿ ಇತರರು ಸಹಾಯಕ್ಕೆ ಧಾವಿಸಿದಾಗ, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ರಿಯಾಜ್ ಅನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ತೆರಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಿಯಾಜ್, ದುಷ್ಕರ್ಮಿಗಳ ದಾಳಿಯಿಂದ ತೀವ್ರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.












Click it and Unblock the Notifications