ನಾಪತ್ತೆಯಾದ ಮೀನುಗಾರರ ಶೋಧಕಾರ್ಯಕ್ಕೆ ಇಳಿದ ಭಾರತೀಯ ನೌಕಾಪಡೆಯ ಹಡಗು
ಉಡುಪಿ, ಜನವರಿ 18: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆದರೂ ಅವರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಕೂಡ ಪತ್ತೆಯಾಗಿಲ್ಲ. ಮೀನುಗಾರರ ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಗದೇ ಇರುವುದರಿಂದ ನಾಪತ್ತೆಯಾಗಿರುವ ಮೀನುಗಾರರ ಮನೆಗಳಲ್ಲಿ ಆತಂಕ ಹೆಚ್ಚಾಗಿದೆ.
ಕಣ್ಮರೆಯಾಗಿರುವ ಮೀನುಗಾರರ ಶೋಧಕಾರ್ಯ ಮುಂದುವರೆದಿದೆ. ಈ ನಡುವೆ ನಾಪತ್ತೆಯಾಗಿರುವ ಮೀನುಗಾರರ ಪತ್ತೆಕಾರ್ಯಕ್ಕೆ ಭಾರತೀಯ ನೌಕಾಪಡೆ ಕಾರ್ಯಾಚರಣೆ ಆರಂಭಿಸಿರುವ ಮಾಹಿತಿ ಲಭ್ಯವಾಗಿದೆ. ಭಾರತೀಯ ನೌಕಾಪಡೆಯ ಹಡಗು ಸಮುದ್ರದ ತಳಭಾಗದಲ್ಲಿ ಶೋಧಕಾರ್ಯ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮುದ್ರದ ತಳ ಶೋಧಿಸಬಲ್ಲ ನೌಕಾಪಡೆಯ ಹಡಗು ಭಾನುವಾರದಿಂದಲೇ ಕಾರ್ಯಾಚರಣೆಗೆ ಇಳಿದಿದ್ದು, ಅವಘಡದ ಸಾಧ್ಯತೆಯ ಮುನ್ಸೂಚನೆ ನೀಡಿದೆ. ನೌಕಾಪಡೆಯ ಈ ಹಡಗು ಮಹಾರಾಷ್ಟ್ರ ಮತ್ತು ಗೋವಾ ಭಾಗದ 12 ನಾಟಿಕಲ್ ಮೈಲಿ ದೂರದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಆದರೆ ಸುವರ್ಣ ತ್ರಿಭುಜ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರ ಸುಳಿವು ಲಭಿಸಿದ ಮಾಹಿತಿ ಇನ್ನೂ ಬಂದಿಲ್ಲ.

ಈ ನಡುವೆ ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯ ವಿಚಾರವಾಗಿ ನಿನ್ನೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ. ವಿಧಾನಸೌಧದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ನೇತೃತ್ವದಲ್ಲಿ ಕರಾವಳಿಯ ಭದ್ರತೆ ಮತ್ತು ಮೀನುಗಾರರ ನಾಪತ್ತೆ ಪ್ರಕರಣದ ಕುರಿತ ಸಭೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ನಾಪತ್ತೆಯಾಗಿರುವ ಮೀನುಗಾರರು ಮತ್ತು ಬೋಟ್ ಕುರುಹು ಪತ್ತೆಯಾಗುವವರೆಗೂ ಶೋಧ ಮುಂದುವರೆಸುವಂತೆ ಟಿಎಂ ವಿಜಯ ಭಾಸ್ಕರ್ ಆದೇಶಿಸಿದ್ದಾರೆ.
ಡಿ 15 ಮತ್ತು 16 ರಂದು ಮಹಾರಾಷ್ಟ್ರದ ಮಾಲ್ವಣ್ ಸಮೀಪ ಸಮುದ್ರದಲ್ಲಿ ಬೋಟ್ ಗಳು ಗುಂಪಾಗಿ ಇರುವ ಚಿತ್ರಗಳು ಇಸ್ರೋ ಕಳುಹಿಸಿದ ವರದಿಯಲ್ಲಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಅದರಲ್ಲಿ ಸುವರ್ಣ ತ್ರಿಭುಜ ಬೋಟ್ ಇದೆಯೋ ಇಲ್ಲವೋ ಎಂದು ಇನ್ನಷ್ಟು ಪತ್ತೆಯಾಗಬೇಕಿದೆ.












Click it and Unblock the Notifications