ಕಪಿಗಳ ಕಡಿವಾಣಕ್ಕೆ ಟೈಗರ್ ಡಾಗ್ ಪರಿಕಲ್ಪನೆ!
ಮಂಗಗಳ ಉಪಟಳವನ್ನು ತಪ್ಪಿಸಲು ನಾಯಿಯನ್ನು ಹುಲಿಯಾಗಿ ಪರಿವರ್ತಿಸಿ ಹೊಸ ಪರಿಕಲ್ಪನೆಯನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರದ ತೋಟದ ಮಾಲೀಕರೊಬ್ಬರು
ಕುಂದಾಪುರ, ನವೆಂಬರ್,15: ಕಷ್ಟಪಟ್ಟು ಬೆಳೆಸಿದ ತೋಟಗಳಿಗೆ ನುಗ್ಗಿ ಮನಬಂದಂತೆ ಹಣ್ಣು-ಹಂಪಲುಗಳನ್ನು ತಿಂದು ಭಾರೀ ದಾಂದಲೆ ಮಾಡುವ ಮರ್ಕಟಗಳ ಉಪಟಳವನ್ನು ತಡೆಯಲು ಇಲ್ಲಿಯ ಅಭಿಯಂತರರೊಬ್ಬರು ಹೊಸ ವಿಧಾನ ಕಂಡುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಿರೂರು ಗ್ರಾಮದ ನಿವಾಸಿ ನಾಗರಾಜ್ ಅವರು ತಮ್ಮ ಆರು ಎಕರೆ ತೋಟದಲ್ಲಿ ಅಡಿಕೆ, ತೆಂಗು, ಮೆಣಸು, ಹಾಗೂ ವಿಧ ವಿಧದ ತರಕಾರಿಗಳನ್ನು ಹಣ್ಣುಗಳನ್ನು ಸಮೃದ್ಧವಾಗಿ ಬೆಳೆದಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾದ ನಾಗರಾಜ್ ಅವರು ತಾವು ಕಷ್ಟಪಟ್ಟು ಬೆಳೆಸಿದ ತಮ್ಮ ಬೆಳೆಗಳನ್ನು ಮಂಗಗಳ ಉಪಟಳದಿಂದ ಕಾಪಾಡಲು ಹುಲಿಯಂತಹ ನಾಯಿಯನ್ನು ನೇಮಿಸಿಕೊಂಡಿದ್ದಾರೆ. ಈ ನಾಯಿಯೂ ಸಹ ಹುಲಿಯ ರೀತಿ ಗೋಚರಿಸುವಂತೆ ಅವರು ಮಾಡಿದ್ದಾರೆ.
ನಾಯಿಗೆ ಭಯಪಡದ ಮಂಗಗಳು ಹುಲಿಗೆ ಖಂಡಿತ ಅಂಜುತ್ತವೆ ಎಂಬುದನ್ನು ಅರಿತುಕೊಂಡ ನಾಗರಾಜ್ ತಮ್ಮ ಮನೆಯಲ್ಲಿ ಹುಲಿಯಂತೆ ಗಾಂಭೀರ್ಯವಾಗಿ ಕುಳಿತುಕೊಂಡಿದ್ದ ನಾಯಿಯನ್ನು ಹುಲಿಯಾಗಿ ಪರಿವರ್ತಿಸಿದ್ದಾರೆ.
ಥೇಟ್ ಹುಲಿಯಂತೆಯೇ ಗೋಚರಿಸುವಂತೆ ನಾಯಿಗೆ ಬಣ್ಣ ಬಳಿದಿದ್ದಾರೆ ನಾಗರಾಜ್. ನಾಯಿಯನ್ನು ಹುಲಿಯಂತೆ ಬದಲಾಯಿಸಿ ತೋಟದಲ್ಲಿ ಗಸ್ತು ತಿರುಗಲು ಬಿಟ್ಟಾಗಿನಿಂದ ಮಂಗಗಳ ಉಪದ್ರವ ಇಲ್ಲ ಎಂದು ಹೇಳುತ್ತಾರೆ ನಾಗರಾಜ್.
ನಾಗರಾಜ್ ಅವರ ಈ ಹುಲಿ ಶ್ವಾನ ಪರಿಕಲ್ಪನೆ ಯಶಸ್ವಿಯಾದ್ದರಿಂದ ಅಕ್ಕಪಕ್ಕದ ಮಾಲೀಕರೂ ಸಹ ತಮ್ಮ ಶ್ವಾನಗಳನ್ನು ಹುಲಿಯಂತೆ ಬದಲಾಯಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ.