ಕೊರೊನಾ ಸಲಕರಣೆ ಖರೀದಿಯಲ್ಲಿನ ಭ್ರಷ್ಟಾಚಾರದ ನ್ಯಾಯಾಂಗ ತನಿಖೆ ಆಗಲಿ: ದಿನೇಶ್ ಗುಂಡೂರಾವ್
ಉಡುಪಿ, ಆಗಸ್ಟ್ 03: ರಾಜ್ಯದಲ್ಲಿ ಕೊರೊನಾ ಸಲಕರಣೆಗಳ ಖರೀದಿ ವಿಚಾರದಲ್ಲಿ ವ್ಯಾಪಕ ಲೂಟಿಯಾಗಿದ್ದು, ಕಾಂಗ್ರೆಸ್ ಪಕ್ಷ ದಾಖಲೆ ಸಮೇತ ಸಾಕ್ಷ್ಯ ನೀಡಿ 25 ದಿನ ಕಳೆದರೂ ಅದಕ್ಕೆ ಉತ್ತರ ಕೊಡುವ ಮನಸ್ಸು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದರು.
Recommended Video
ಉಡುಪಿಯ ಡಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ವೆಂಟಿಲೇಟರ್, ಪಿಪಿಇ, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ. ಮೂರರಿಂದ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನೆ ಮಾಡಿದರೆ ಲೀಗಲ್ ನೋಟೀಸ್ ಕೊಡುತ್ತಾರೆ. ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ, ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ಮಾಡಲಿದೆ" ಎಂದರು.
ಕೊರೊನಾ ಕಿಟ್ ಗಳ ಖರೀದಿ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಅವರು, "ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಾಮಮಂದಿರದ ಉದ್ದೇಶ ದುರುಪಯೋಗ ಬೇಡ. ಮಂದಿರ ನಿರ್ಮಾಣ ಆದ್ರೆ ಕೊರೊನಾ ದೂರವಾಗಲ್ಲ. ಬಿಜೆಪಿ ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು" ಎಂದರು.

ಸಿಎಂ ಶೀಘ್ರ ಗುಣಮುಖರಾಗಲಿ: ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರು ಶೀಘ್ರ ಗುಣಮುಖರಾಗಲಿ. ಯಡಿಯೂರಪ್ಪ ರಾಜ್ಯದ ಹಿರಿಯ ನಾಯಕರು. ಅದೇ ರೀತಿ ಅಮಿತ್ ಶಾ , ಐವನ್ ಡಿಸೋಜ ಎಲ್ಲರೂ ಗುಣಮುಖರಾಗಲಿ. ಯಡಿಯೂರಪ್ಪನವರಿಗೆ ಹೆಚ್ಚು ವಯಸ್ಸಾಗಿರುವುದರಿಂದ ಆತಂಕ ಇದೆ. ಸಿಎಂ ಆರೋಗ್ಯ ದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಹೇಳಿದರು.












Click it and Unblock the Notifications