ವಿಚಿತ್ರ ಪ್ರಕರಣ: ತಮ್ಮ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿ ಸಜೀವ ದಹನ
ಅಪರೂಪದ ಪ್ರಕರಣವೊಂದರಲ್ಲಿ ತಮ್ಮ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿಕೊಂಡು ದಂಪತಿಗಳಿಬ್ಬರು ಸಜೀವವಾಗಿ ದಹನವಾದ ಘಟನೆ, ಉಡುಪಿ ಜಿಲ್ಲೆ ಕಾರ್ಕಳದ ಬಳಿಯ ಗ್ರಾಮವೊಂದರಿಂದ ವರದಿಯಾಗಿದೆ.
ಉಡುಪಿ, ಡಿ 25: ತಮ್ಮ ಚಿತೆಗೆ ತಾವೇ ಅಗ್ನಿಸ್ಪರ್ಶ ಮಾಡಿಕೊಂಡು ದಂಪತಿಗಳಿಬ್ಬರು ಸಜೀವವಾಗಿ ದಹನವಾದ ಅಪರೂಪದ ಘಟನೆ ಜಿಲ್ಲೆಯ ಕಾರ್ಕಳದ ಬಳಿ ತಡವಾಗಿ ಬೆಳಕಿಗೆ ಬಂದಿದೆ.
ಮಕ್ಕಳಾಗಲಿಲ್ಲ ಎನ್ನುವ ನೋವಿನಿಂದ ಕೊರಗುತ್ತಿದ್ದ ಕಾರ್ಕಳ, ಹಿರ್ಗಾನದ ಬೇಗೂರಿನ ಸೀತಾರಾಂ ಆಚಾರಿ ಮತ್ತು ಸುನಂದಾ ದಂಪತಿಗಳು ಈ ವಿಚಿತ್ರ ಪ್ರಕರಣದಲ್ಲಿ ಸಾವನ್ನಪ್ಪಿದವರು.
ವೃತ್ತಿಯಲ್ಲಿ ಬಡಗಿಯಾಗಿರುವ ಸೀತಾರಾಂ ಆಚಾರಿ ಹದಿಮೂರು ವರ್ಷಗಳ ಹಿಂದೆ ಸುನಂದಾ ಅವರನ್ನು ಮದುವೆಯಾಗಿದ್ದರು. ಸಂತಾನ ಪ್ರಾಪ್ತಿಯಾಗದಿದ್ದರಿಂದ ಖಿನ್ನತೆಗೊಳಗಾಗಿದ್ದ ದಂಪತಿಗಳು ತಮ್ಮ ಕುಟುಂಬಸ್ಥರ ಮನೆಗೂ ಹೋಗುತ್ತಿರಲಿಲ್ಲ.
ಬಾವಿನೀರು ಸೇದಲು ದಿನಾ ಬರುತ್ತಿದ್ದ ಸುನಂದಾ, ಎರಡು ದಿನದಿಂದ ಬರದ ಹಿನ್ನಲೆಯಲ್ಲಿ ಸುತ್ತಮುತ್ತಲಿನವರು ಅವರ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯ ದೇವರ ಕೋಣೆಯಲ್ಲಿ ಸೌದೆ ಹೊತ್ತಿಸಿರುವ ಮತ್ತು ಅದರಲ್ಲಿ ಮೂಳೆಗಳು ಗೋಚರಿಸುತ್ತಿದ್ದವು. ಜೊತೆಗೆ, ಮನೆಯಲ್ಲಿ ಕರ್ಪೂರ, ಗಂಧದ ಮರದ ಹುಡಿ, ಅಗರಬತ್ತಿ ಪ್ಯಾಕೆಟುಗಳು ಕಂಡುಬಂದಿವೆ.
ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲದ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳೀಯರಿಂದ ಮಾಹಿತಿ ಮತ್ತು ಕೆಲವು ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಇದೊಂದು ಅಪರೂಪದ ಸಜೀವ ದಹನ ಪ್ರಕರಣವಾಗಿರಬಹುದೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ. (ಮಾಹಿತಿ: ವಿಜಯವಾಣಿ)