ಉಡುಪಿಯಲ್ಲಿ ನೂರಾರು ಬಡವರಿಗೆ ವೆಜ್ ಬಿರಿಯಾನಿ, ಮೊಟ್ಟೆ ವಿತರಣೆ
ಉಡುಪಿ, ಮಾರ್ಚ್ 27: ಕೊರೊನಾವೈರಸ್ ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಗೆ ಸೂಚಿಸಲಾಗಿದೆ. ಈ ಕಾರಣಕ್ಕಾಗಿ ಉಡುಪಿಯ ಹಲವೆಡೆ ಬಡವರಿಗೆ ಉಚಿತ ಊಟ ವಿತರಣೆ ಮಾಡಲಾಗುತ್ತಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಅನೇಕ ಬಡವರು ಮತ್ತು ಅಶಕ್ತರ ಬದುಕು ದುಸ್ತರವಾಗಿದೆ. ಮುಖ್ಯವಾಗಿ ಅಂದಂದೇ ದುಡಿದು ತಿನ್ನಬೇಕಾದ ಬಡ ವರ್ಗಕ್ಕೆ ಲಾಕ್ ಡೌನ್ ನಿಂದ ತೀವ್ರ ತೊಂದರೆಯಾಗಿದೆ. ಇಂಥವರಿಗೆ ದಾನಿಗಳ ನೆರವಿನಿಂದ ಊಟ ವಿತರಿಸುವ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಉಡುಪಿಯಲ್ಲಿ ನಡೆಯುತ್ತಿದೆ.

ಮೂರನೇ ದಿನವಾದ ಇಂದು ನೂರಾರು ಅಶಕ್ತರಿಗೆ ವೆಜ್ ಬಿರಿಯಾನಿ ಮತ್ತು ಮೊಟ್ಟೆ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತರ ತಂಡಗಳು ಈ ಕೆಲಸವನ್ನು ತುಂಬಾ ಪ್ರೀತಿ, ಶ್ರದ್ಧೆಯಿಂದ ಮಾಡುತ್ತಿವೆ. ಇಂದು ಬಸ್ ನಿಲ್ದಾಣದ ಸಮೀಪ ಊಟದ ಹೊತ್ತಿಗೆ ಜನರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು. ಸಾಮಾಜಿಕ ಅಂತರ ಕಾಪಾಡುವ ಮೂಲಕ ಬಂದ ಪ್ರತಿಯೊಬ್ಬರಿಗೂ ಊಟದ ಪೊಟ್ಟಣ ನೀಡಿ ಕಳಿಸಲಾಯಿತು. ಏಪ್ರಿಲ್ ಹದಿನಾಲ್ಕರ ತನಕವೂ ಆಹಾರ ವಿತರಣೆ ಕಾರ್ಯ ಮುಂದುವರೆಯಲಿದೆ.

ಕೊರೊನಾ ತಡೆಗೆ ಕೃಷ್ಣಮಠದಲ್ಲಿ ಪೂಜೆ: ಈ ನಡುವೆ ಕೊರೋನಾ ನಿರ್ಮೂಲನೆಗೆ ಕೃಷ್ಣಮಠದಲ್ಲಿ ಧನ್ವಂತರಿ ಯಾಗವನ್ನೂ ನೆರವೇರಿಸಲಾಯಿತು. ಪರ್ಯಾಯ ಅದಮಾರು ಮಠದ ನೇತೃತ್ವದಲ್ಲಿ ಮಠದ ಯಾಗಶಾಲೆಯಲ್ಲಿ ಐದಾರು ಋತ್ವಿಜರು ಮಾತ್ರ ಸರಳವಾಗಿ ಧನ್ವಂತರಿ ಯಾಗ ನಡೆಸಿದರು. ಭಕ್ತರು ಮನೆಯಲ್ಲೇ ಪ್ರಾರ್ಥನೆ ಮಾಡಲು ಮಠದಿಂದ ಸೂಚನೆ ನೀಡಲಾಯಿತು.












Click it and Unblock the Notifications