ತೆರೆಮರೆಯಲ್ಲಿ ನಿಂತು ಸಮಾಜ ಸೇವೆ ಮಾಡುತ್ತಿರುವ ಉಡುಪಿಯ ಯುವಕ
ಉಡುಪಿ, ನ 15: ಕರ್ನಾಟಕದಿಂದ ಅದರಲ್ಲೂ ತುಳುನಾಡಿನ ಅನೇಕರು ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಅನೇಕ ಉದ್ದೇಶಗಳಿಗಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಹೀಗೆ ಅನೇಕರು ತಮ್ಮ ದುಡಿಮೆಯ ಮೂಲಕ ಯಶಸ್ಸನ್ನು ಸಂಪಾದಿಸಿ ತಮ್ಮ ಊರಿನಲ್ಲಿ ಅವಶ್ಯಕತೆ ಇರುವವರಿಗೆ ಸಹಾಯವನ್ನು ಮಾಡುತ್ತಿದ್ದಾರೆ.
ಹೀಗೆ, ತೆರೆಮರೆಯಲ್ಲಿ ನಿಂತು ತನ್ನಿಂದ ಆದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವವರಲ್ಲಿ ಕಾರ್ಕಳ ಕುಂಟಾಡಿ ಮೂಲದ ಇದೀಗ ದುಬೈನಲ್ಲಿ ಕಳೆದ ಹತ್ತು ವರ್ಷದಿಂದ ವಾಸವಾಗಿರುವ ಕಿಶೋರ್ ಶಿವರಾಮ್ ಶೆಟ್ಟಿ ಕೂಡ ಒಬ್ಬರು.
ಉಡುಪಿಯ ಕಾರ್ಕಳ ಮೂಲದ ಮನೆತನದವರಾದರೂ ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಎಲ್ಲವೂ ಮುಂಬೈನಲ್ಲಿ. ಮುಂಬೈನ ಡೊಂಬಿವಿಲಿಯಲ್ಲಿ ವಾಸವಾಗಿದ್ದವರು. ಜೀವನದಲ್ಲಿ ಏನಾದರೂ ಮಾಡಬೇಕೆಂಬ ಛಲ ಉಳ್ಳ ವ್ಯಕ್ತಿ.

ಹೀಗಿರುವಾಗ ಅವರಿಗೆ ದುಬೈನ ಖ್ಯಾತ ಸಂಸ್ಥೆ ಡಾ||ಬು ಅಬ್ದುಲ್ಲಾ ಗ್ರೂಪ್ ನಲ್ಲಿ ಉದ್ಯೋಗವಕಾಶ ಹುಡುಕಿ ಬಂತು. ಹೀಗೆ ದುಬೈಗೆ ಹೋದ ಕಿಶೋರ್ ಸದಾ ಸಮಾಜ ಸೇವೆಯ ಬಗ್ಗೆ ಹೆಚ್ಚು ಯೋಚಿಸಲಾರಂಭಿಸಿದರು.
ತನ್ನ ಸಂಪಾದನೆಯಲ್ಲಿ ಅನೇಕ ಶಿಕ್ಷಣ ಉದ್ಯೋಗ ಚಿಕಿತ್ಸೆಗಾಗಿ ಸಹಾಯ ಮಾಡಲಾರಂಭಿಸಿದರು. ಕೋವಿಡ್ ಸಂದರ್ಭದಲ್ಲಿ ಅನೇಕರಿಗೆ ಇವರು ನೆರವಾಗುವ ಮೂಲಕ ಅನೇಕ ಕುಟುಂಬದ ಕಣ್ಣೀರನ್ನು ಒರೆಸುವ ಪ್ರಯತ್ನವನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇವರ ಸೇವೆಗೆ ಇವರಿಗೆ ದುಬೈನಲ್ಲಿ ಗೌರವ ಕೂಡ ದೊರಕಿದೆ.

ಇವರು ಸ್ವತಃ ಒಬ್ಬ ಕ್ರೀಡಾ ಪಟು ಆಗಿದ್ದು ಕ್ರಿಕೆಟ್ ಹಾಗು ಫುಟ್ಬಾಲ್ ಆಡುತ್ತಾರೆ. ಇವರ ಹೆಸರಿನಲ್ಲಿ ಗಿನ್ನಿಸ್ ದಾಖಲೆ ಕೂಡ ಇದೆ. ದುಬೈನಲ್ಲಿ ನಡೆದ ಅನೇಕ ರಾಷ್ಟ್ರಗಳ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮವು ಗಿನ್ನಿಸ್ ದಾಖಲೆಯ ಪುರಸ್ಕಾರ ಕ್ಕೆ ಪಾತ್ರವಾಗಿತ್ತು. ಕಿಶೋರ್ ಅವರು ಈ ಕಾರ್ಯಕ್ರಮದ ಭಾಗವಾಗಿದ್ದರು.
ಇವರಿಗೆ ದುಬೈನಲ್ಲಿ ಅನೇಕ ಪ್ರಶಸ್ತಿಗಳು ದೊರಕಿವೆ.ಇಷ್ಟಾದರು ಇವರು ಯಾವುದೇ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಾರೆ. ದುಬೈನಲ್ಲಿದ್ದರೂ ಊರಿನವರ ಕಷ್ಟಕ್ಕೆ ಸ್ಪಂದಿಸುತ್ತಾರೆ. "ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಗಲ್ಪ್ ರಾಷ್ಟ್ರಕ್ಕೆ ಹೀಗೆ ಅನೇಕ ರಾಷ್ಟ್ರಕ್ಕೆ ಭೇಟಿ ನೀಡಿದರೂ, ತುಳು ಭಾಷೆಗೆ ತನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎನ್ನುತ್ತಾರೆ" ಕಿಶೋರ್ ಶೆಟ್ಟಿ.












Click it and Unblock the Notifications