ಪ್ರಕೃತಿ ಚಿಕಿತ್ಸೆಯ ಬಳಿಕ ಹೋಮದ ಮೊರೆ ಹೋದ ಕುಮಾರಸ್ವಾಮಿ
ಉಡುಪಿ, ಮೇ 03:ಉಡುಪಿಯ ಕಾಪು ಸಮೀಪದ ಮೂಳೂರಿನ ಸಾಯಿರಾಧ ರೆಸಾರ್ಟ್ ನಲ್ಲಿ ಕಳೆದ ಐದು ದಿನಗಳಿಂದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕಿತ್ಸೆ ಮುಗಿಸಿ ಇಂದು ಚಿಕ್ಕಮಗಳೂರಿಗೆ ತೆರಳಲಿದ್ದಾರೆ.
ಈ ನಡುವೆ ಮುಖ್ಯಮಂತ್ರಿಯ ಪುತ್ರ, ಚಿತ್ರನಟ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಶುಕ್ರವಾರ ಮೂಳೂರಿಗೆ ಆಗಮಿಸಿದ್ದು, ತಂದೆ ಮತ್ತು ಅಜ್ಜ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ದಾರೆ.
ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡ ಚಿಕ್ಕಮಗಳೂರಿನ ಕಮ್ಮರಡಿಗೆ ತೆರಳುವ ಸಾಧ್ಯತೆಯಿದ್ದು, ಅಲ್ಲಿ ಪೂಜೆಯಲ್ಲಿ ಭಾಗವಹಿಸುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

ಕೊಪ್ಪ ತಾಲೂಕಿನ ಕಮ್ಮರಡಿಗೆಯ ಉಮಾಮಹೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯಂದೇ ಕುಮಾರಸ್ವಾಮಿಯಿಂದ ವಿಶೇಷ ಪೂಜೆ ನಡೆಯಲಿದೆ ಎಂದು ಹೇಳಲಾಗಿದ್ದು, ಉಡುಪಿಯಿಂದ ಚಿಕ್ಕಮಗಳೂರಿಗೆ ಹೊರಟು ಸಿಎಂ ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಇಲ್ಲಿಂದ ಸಂಜೆ ಹೊರಡಲಿರುವ ಕುಮಾರಸ್ವಾಮಿ ಕೊಪ್ಪ ತಾಲೂಕಿನ ತಲವಾನೆ ಎಸ್ಟೇಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಗ್ಗೆ ಸಿಎಂ ಕುಟುಂಬ ರುದ್ರಹೋಮ ಹಾಗೂ ಗಣಪತಿ ಹೋಮ ನಡೆಸಲಿದೆ. ಗಣೇಶ್ ಸೋಮಾಯಾಜಿ ಅವರ ಸೂಚನೆ ಮೇರೆಗೆ ಈ ಪೂಜೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.











Click it and Unblock the Notifications