ಭಾಸ್ಕರ್ ಶೆಟ್ಟಿ ಕೊಲೆ : ಡಿವೈಎಸ್ಪಿ ಜತೆ ಹಲವು ಬಾರಿ ಮಾತಾಡಿದ್ದ ರಾಜೇಶ್ವರಿ
ಉಡುಪಿ, ಸೆಪ್ಟೆಂಬರ್ 01 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಡಿವೈಎಸ್ಪಿ ಹಾಗೂ ಉಡುಪಿಯಲ್ಲಿಯೇ ಕೆಲಸ ಮಾಡುತ್ತಿರುವ ಕೆಳ ಹಂತದ ಪೊಲೀಸ್ ಸಿಬ್ಬಂದಿಗಳ ಜತೆಗೆ ಹಲವು ಬಾರಿ ಮಾತನಾಡಿದ್ದ ವಿಷಯ ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ.
ಭಾಸ್ಕರ್ ಶೆಟ್ಟಿ ಅವರ ಕೊಲೆ ಬಳಿಕ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು, ಸಾಕ್ಷಿ ಸಿಗದಂತೆ ಮಾಡಿದ್ದನ್ನು ನೋಡಿದಾಗ ಅಪರಾಧ ವಿಷಯದಲ್ಲಿ ಪರಿಣತಿ ಹೊಂದಿರುವವರು ಸಹಾಯ ಮಾಡಿರುವ ಬಗ್ಗೆ ಅನುಮಾನ ಹುಟ್ಟಿಕೊಂಡಿತ್ತು.[ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಸುಪಾರಿ ಹಂತಕರ ಕೈವಾಡ?]
ಪ್ರಕರಣದ ಇನ್ನೊಬ್ಬ ಆರೋಪಿ ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಹಿಂದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಅಪರಾಧ ಪತ್ತೆ ವಿಷಯ ಆಧಾರಿತ ಕಾರ್ಯಕ್ರಮವನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದ ವಿಷಯ ಸಹ ಬಹಿರಂಗವಾಗಿತ್ತು.[ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ]
ತಾಯಿ-ಮಗ ಮತ್ತು ಕಾರ್ಕಳದ ನಂದಳಿಕೆಯ ನಿರಂಜನ ಭಟ್ ಹಾಗೂ ಇದೇ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದರು.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]
ಆದರೆ, ಇವರ ಹೊರತಾಗಿಯೂ ಈ ಹತ್ಯೆ ಪ್ರಕರಣದಲ್ಲಿ ಬೇರೆಯವರ ಕೈವಾಡ ಇರುವ ಬಗ್ಗೆ ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ, ಸಹೋದರರು, ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಆಗ ತನಿಖಾಧಿಕಾರಿ ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಎಸ್.ವಿ.ಗಿರೀಶ್ ಅವರ ಸಾಚಾತನವನ್ನು ಪ್ರಶ್ನಿಸಿದ್ದರು. ಉನ್ನತ ಮಟ್ಟದ ತನಿಖೆಗೂ ಅವರು ಆಗ್ರಹಿಸಿದ್ದರು. ಇದೇ ಕಾರಣಕ್ಕೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಪತಿ-ಪತ್ನಿ ಮಧ್ಯೆ ಇದ್ದ ಸಾಂಸಾರಿಕ ಜಗಳ, ವ್ಯವಹಾರದ ವಿಷಯದಲ್ಲಿ ಇಬ್ಬರ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ, ಅಕ್ರಮ ಸಂಬಂಧ ಹಾಗೂ ಕೃತ್ಯದಿಂದ ಲಾಭ ಪಡೆಯಲು ಹೊರಗಿನ ವ್ಯಕ್ತಿಗಳು ಸಹಾಯ ಮಾಡಿರುವ ಸಾಧ್ಯತೆ. ಈ ಎಲ್ಲಾ ಆಯಾಮಗಳಿಂದಲೂ ಸಿಐಡಿ ತನಿಖೆ ನಡೆಸುತ್ತಿದೆ.
ಎಸ್ಪಿ ನೇತೃತ್ವದ ಸಿಐಡಿ ತಂಡ ಉಡುಪಿಗೆ ಬಂದು ತನಿಖೆಗೆ ಚಾಲನೆ ನೀಡಿದ ನಂತರ ಡಿಐಜಿ ಸೋನಿಯಾ ನಾರಂಗ್ ಬಂದಿದ್ದರು. ಪ್ರಕರಣದ ತೀವ್ರತೆ ಗೊತ್ತಾದ ನಂತರ ಸಿಐಡಿಯ ಎಡಿಜಿಪಿ ಪ್ರತಾಪ್ ರೆಡ್ಡಿ ಹಾಗೂ ಸಿಐಡಿ ಡಿಜಿಪಿ ಎಚ್. ಸಿ ಕಿಶೋರ್ ಚಂದ್ರ ಅವರು ಬಂದು ಹಾಲಿ ತನಿಖಾಧಿಕಾರಿಗಳು.
ಈ ಹಿಂದೆ ತನಿಖೆಯ ನೇತೃತ್ವ ವಹಿಸಿದ್ದ ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಮನ ಅವರೊಂದಿಗೆ ಸಿಐಡಿ ಅಧಿಕಾರಿಗಳು ಸಭೆ ನಡೆಸಿದ್ದು ಪ್ರಕರಣದ ತೀವ್ರತೆಗೆ ಸಾಕ್ಷಿಯಾಗಿತ್ತು.