ಬೈಂದೂರಿನ ಗೋಪಾಲ ಪೂಜಾರಿಗೆ ಕೆಎಸ್ಆರ್ ಟಿಸಿ ಅಧ್ಯಕ್ಷ ಪಟ್ಟ
ಬೆಂಗಳೂರು/ ಉಡುಪಿ, ಜನವರಿ 16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ ಟಿಸಿ) ಅಧ್ಯಕ್ಷರಾಗಿ ಬೈಂದೂರು ಶಾಸಕ ಗೋಪಾಲ ಪೂಜಾರಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರು ಹೊರಡಿಸಿದ ಆದೇಶದ ಪ್ರತಿ ತನ್ನ ಕೈ ಸೇರಿದ್ದು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಅಧಿಕಾರ ಗ್ರಹಣ ಮಾಡುವುದಾಗಿ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಬೈಂದೂರು ಕ್ಷೇತ್ರದಿಂದ ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಾರ್ಟಿಯ ಮೂಲಕ ತನ್ನ ರಾಜಕೀಯ ಜೀವನ ಆರಂಭಿಸಿದ ಗೋಪಾಲ ಪೂಜಾರಿ ಬಳಿಕ ಕಾಂಗ್ರೆಸ್ ಸೇರಿ ಬೈಂದೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಖಚಿತವಾಗಿ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಗೋಪಾಲ ಪೂಜಾರಿಯವರಿಗೆ ಸಚಿವ ಸ್ಥಾನ ತಪ್ಪಿ ಹೋಗಿತ್ತು. ವಿನಯ ಕುಮಾರ ಸೊರಕೆ ಅವರಿಗೆ ಸಚಿವ ಸ್ಥಾನ ದಕ್ಕಿ ಗೋಪಾಲ ಪೂಜಾರಿ ನಿರಾಸೆಗೊಂಡಿದ್ದರು.[ಸಂಕ್ರಾಂತಿ ಹಬ್ಬಕ್ಕೆ 650 ಹೆಚ್ಚುವರಿ ಕೆಎಸ್ಆರ್ ಟಿಸಿ ಬಸ್]

ಬಳಿಕ ಮಂತ್ರಿಮಂಡಲ ಪುನಾರಚನೆ ವೇಳೆ ಮತ್ತೊಮ್ಮೆ ಸಚಿವ ಸ್ಥಾನದ ಆಸೆ ಗರಿಗೆದರಿದಾಗ ಆಗಲೂ ಸಚಿವ ಸ್ಥಾನ ಪೂಜಾರಿಗೆ ದಕ್ಕದೆ ಅದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಪಾಲಾಗಿತ್ತು. ಆಗ ತನ್ನ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದ ಗೋಪಾಲ ಪೂಜಾರಿ ಬಳಿಕ ತಣ್ಣಗಾಗಿದ್ದರು.
ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೋಪಾಲ ಪೂಜಾರಿಯವರನ್ನು ಕೆಎಸ್ಅರ್ ಟಿಸಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ. ಈ ಸ್ಥಾನವನ್ನು ಗೋಪಾಲ ಪೂಜಾರಿ ಸ್ವಾಗತಿಸಿದ್ದು ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.












Click it and Unblock the Notifications