ಉಡುಪಿ; ಸರ್ಕಾರದಿಂದ ಪರ್ಕಳದ ಜನರಿಗೆ ಉಚಿತ ಧೂಳು ಭಾಗ್ಯ!
ಉಡುಪಿ, ಜನವರಿ 11: ಕೊರೊನಾ ವಿರುದ್ಧ ಹೋರಾಟಕ್ಕೆ ಮಾಸ್ಕ್ ಕಡ್ಡಾಯ, ಜನ ಮಾಸ್ಕ್ ಹಾಕಬೇಕು, ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುವವರಿಗೆ ಸರ್ಕಾರ ದಂಡವನ್ನೂ ವಿಧಿಸುತ್ತಿದೆ. ಆದರೆ ಉಡುಪಿಯ ಈ ರಸ್ತೆಯಲ್ಲಿ ಜನ ಮಾಸ್ಕ್ ಇಲ್ಲದೇ ಹೋಗುವುದಿಲ್ಲ.
ರಸ್ತೆ ಮೇಲೆ ಹೋಗಬೇಕಾದರೂ ಮಾಸ್ಕ್ ಬೇಕೇ ಬೇಕು. ಮಾಸ್ಕ್ ಇಲ್ಲದೇ ರಸ್ತೆ ಮೇಲೆ ಹೋಗುವುದಕ್ಕೂ ಕಷ್ಟ. ಇದಕ್ಕೆ ಕಾರಣ ಕೊರೊನಾ ಅಲ್ಲ, ಕಿತ್ತು ಹೋಗಿರುವ ರಸ್ತೆಯಿಂದ ಬರುವ ಧೂಳು.
ಹೆಸರಿಗೆ ಮಾತ್ರ ಇದು ರಾಷ್ಟ್ರೀಯ ಹೆದ್ದಾರಿ. ಆದರೆ ರಸ್ತೆ ಮಾತ್ರ ಹಳ್ಳಿಗಾಡಿನ ಕಚ್ಚಾ ರಸ್ತೆಯಂತಿದೆ. ಅಲ್ಲದೇ ರಸ್ತೆ ಕಾಮಗಾರಿ ನೆಪದಲ್ಲಿ ಅಂಗೈ ಅಗಲದ ಮನೆ ಜಾಗ ಕಳೆದುಕೊಂಡವರು, ಅತ್ತ ನಾಲ್ಕು ವರ್ಷಗಳಿಂದ ರಸ್ತೆಯೂ ಇಲ್ಲ, ಇತ್ತ ಪರಿಹಾರ ಹಣವೂ ಇಲ್ಲದೇ ಸರ್ಕಾರವನ್ನು ಶಪಿಸುತ್ತಿದ್ದಾರೆ.

ಧೂಳು.. ಧೂಳು.. ಈ ರಸ್ತೆಯ ತುಂಬೆಲ್ಲ ಧೂಳೇ ಧೂಳು. ನಡೆದಾಡುವವರು, ವಾಹನ ಸವಾರರು ಈ ರಸ್ತೆಯ ಅವ್ಯವಸ್ಥೆಗೆ ಕಳೆದ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಶಪಿಸುತ್ತಲೇ ಇದ್ದಾರೆ. ಯಾಕೆಂದರೆ ಅಷ್ಟು ಕೆಟ್ಟದಾಗಿದೆ ಈ ರಸ್ತೆ ಪರಿಸ್ಥಿತಿ..
ಉಡುಪಿಯ ಪರ್ಕಳದ ಜನತೆಗೆ ಸಮಸ್ಯೆಗಳಿಂದ ಮುಕ್ತಿ ಕಾಣುವ ಸುದಿನ ಇನ್ನೂ ಬಂದಂತಿಲ್ಲ. ಹಲವು ವರ್ಷಗಳಿಂದ ಇಲ್ಲಿ ಉಡುಪಿಯಿಂದ ಕಾರ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ-169 ಒಂದಲ್ಲ ಒಂದು ಸಮಸ್ಯೆಯಿಂದ ಕೂಡಿದೆ.

ನಗರದ ಇಕ್ಕಟ್ಟಾದ ರಸ್ತೆಯ ಎರಡೂ ಬದಿ ಭೂಸ್ವಾಧೀನ ಮಾಡುವಾಗಲೇ ಜನರಿಗೆ ಸಾಕುಬೇಕಾಗಿತ್ತು. ಕೆಲವರು ತಮ್ಮ ಜಾಗ ಬಿಟ್ಟುಕೊಡುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಹಂತಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಹೊಂಡಗಳಿಂದ ತುಂಬಿದ ರಸ್ತೆಯಲ್ಲಿ ವರ್ಷಗಟ್ಟಲೇ ತೊಂದರೆಗೊಳಗಾಗಿದ್ದ ಜನರಿಗೆ ಈಗ ಇಡೀ ದಿನ ಧೂಳಿನಿಂದಾಗಿ ಹೈರಾಣಾಗಿದ್ದಾರೆ. ಆಗಾಗ್ಗೆ ನಡೆಯುವ ರೋಡ್ ಬ್ಲಾಕ್ ಆಗಿ ಜನ ಕಷ್ಟ ಪಡುತ್ತಿದ್ದಾರೆ.
ಜನ ಪಡಬಾರದ ಕಷ್ಟಪಡುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ. ಧೂಳು, ಹೊಂಡದಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವವರು ವಿವಿಧ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಅನಾಹುತವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರಾದ ಸತೀಶ್ ಪ್ರಭು ಒತ್ತಾಯಿಸಿದ್ದಾರೆ.

ಮೊದಲೇ ಪರ್ಕಳ ಹೆದ್ದಾರಿ ಹೊಂಡ, ಗುಂಡಿಗಳಿಂದ ಕೂಡಿದ್ದು, ಒಂದೆಡೆ ಮಣ್ಣಿನ ರಸ್ತೆ, ಇನ್ನೊಂದೆಡೆ ಮಣ್ಣಿನ ರಸ್ತೆ, ನಗರದ ಜನ ಯಾವುದರಲ್ಲಿ ಹೋಗಬೇಕೋ ಗೊತ್ತಾಗದೇ ಪರದಾಡುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಶಾಲೆಗೆ ಹೋಗುವ ಹೊತ್ತು ಮತ್ತು ಸಂಜೆ ಹೊತ್ತಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ. ಮುಖ್ಯವಾಗಿ ಭೂಸ್ವಾಧೀನ ಆದವರ ಖಾತೆಗೆ ಪರಿಹಾರ ಹಣ ಇನ್ನೂ ಬಂದಿಲ್ಲ. ಹೀಗಾಗಿ ಜನ ನಮ್ಮ ಹಣ ಯಾವಾಗ ಸಿಗಬಹುದು ಅಥವಾ ಸಿಗುತ್ತದೋ ಇಲ್ಲವಾ ಎಂಬ ಗೊಂದಲದಲ್ಲಿದ್ದಾರೆ.
ಈ ಮಧ್ಯೆ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆಯೋ, ನಿಂತಿದೆಯೋ ಒಂದೂ ಗೊತ್ತಾಗಿತ್ತಿಲ್ಲ. ಯಾಕೆಂದರೆ ಕಳೆದ ನಾಲ್ಕು ವರ್ಷಗಳಿಂದ ಆಗಾಗ್ಗೆ ಕಾಮಗಾರಿ ನಡೆಯುತ್ತೆ, ಆಗಾಗ್ಗೆ ನಿಲ್ಲುತ್ತೆ. ಹೀಗಾಗಿ ಸಂಬಂಧಪಟ್ಟವರು ಪರ್ಕಳ ನಿವಾಸಿಗರ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಪರಿಹಾರ ಒದಗಿಸಿ, ರಸ್ತೆ ಕಾಮಗಾರಿ ವೇಗವಾಗಿ ನಡೆದು ಧೂಳಿನಿಂದ ಮುಕ್ತಿ ನೀಡಬೇಕಿದೆ.












Click it and Unblock the Notifications