ಉಡುಪಿ: ಕೃಷ್ಣಮಠದ ವತಿಯಿಂದ 400 ಮಂದಿ ಸಂತ್ರಸ್ಥರಿಗೆ ಉಪಾಹಾರ, ಭೋಜನ ವ್ಯವಸ್ಥೆ
ಉಡುಪಿ, ಸೆಪ್ಟೆಂಬರ್ 21: ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯ ಪ್ರವಾಹದಿಂದಾಗಿ ಉಡುಪಿ ನಗರದ ಶ್ರೀಕೃಷ್ಣ ಮಠದ ಸುತ್ತಲಿನ ನೆರೆ ಪ್ರದೇಶಗಳಾದ ಕಲ್ಸಂಕ, ಪಾರ್ಕಿಂಗ್ ಏರಿಯಾ ಮತ್ತು ಬೈಲಕೆರೆಗಳಲ್ಲಿ ಅನೇಕ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಉಡುಪಿ ನಗರದಲ್ಲಿ ಹಲವರ ಮನೆಗಳು ಜಲಾವೃತಗೊಂಡಿದ್ದು, ನಿತ್ಯದ ಕೆಲಸಕ್ಕೆ ಹೋಗಲೂ ತೊಂದರೆ ಉಂಟಾಗಿದೆ. ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಇವರಿಗೆಲ್ಲ ಇಂದು ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದ್ದಾರೆ.
ಸುಮಾರು 80 ಕುಟುಂಬಗಳ 400 ಜನರಿಗೆ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ ಶ್ರೀಕೃಷ್ಣ ಮಠದಿಂದ ಅನ್ನ ಪ್ರಸಾದ ಬಡಿಸಲಾಯಿತು. ಪ್ರಸಾದ ರೂಪದಲ್ಲಿ ಅನ್ನ ಸಾರು, ಕುಂಬಳಕಾಯಿ ಸಾಂಬಾರು ಮತ್ತು ಪಾಯಸ ವಿತರಿಸಲಾಯಿತು.

ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸಮಾಜದ ಒಳಿತಿಗಾಗಿ ನಿನ್ನೆ ಸಂಜೆ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ರಾತ್ರಿ ಪೂಜೆಯ ನಂತರ ಶ್ರೀಮಠದ ಋತ್ವಿಜರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಭೋಜನ ವಿತರಣೆ ಸಂದರ್ಭ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶಾಸಕರಾದ ಕೆ.ರಘುಪತಿ ಭಟ್, ನಗರಸಭಾ ಆಯುಕ್ತರು, ಕಂದಾಯ ಸಹಾಯಕ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ನೇತೃತ್ವ ವಹಿಸಿದ ಸ್ಥಳೀಯರಾದ ಹರೀಶ್ ಬೈಲಕೆರೆ ಮಠದ ವ್ಯವಸ್ಥಾಪಕರು ಮತ್ತು ಶ್ರೀಕೃಷ್ಣ ಸೇವಾ ಬಳಗದ ವೈ.ಎನ್.ಆರ್ ರಾವ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications