ಉಡುಪಿ: ಹಲಾಲ್ ಮಾಂಸ ಬಹಿಷ್ಕಾರ ಅಭಿಯಾನಕ್ಕೆ ಬೆಂಬಲ ನೀಡಿದ ಶಾಸಕ ರಘುಪತಿ ಭಟ್
ಉಡುಪಿ, ಏಪ್ರಿಲ್ 1: ರಾಜ್ಯದಲ್ಲಿ ಯುಗಾದಿ ಹಬ್ಬದ ನಂತರ ಮಾಡುವ ಹೊಸತೊಡಕು ಆಚರಣೆಯಲ್ಲಿ ಹಲಾಲ್ ಮಾಂಸವನ್ನು ಹಿಂದೂಗಳು ಸ್ವೀಕಾರ ಮಾಡದಂತೆ ಹಿಂದೂ ಸಂಘಟನೆಗಳು ಅಭಿಯಾನವನ್ನು ಮಾಡುತ್ತಿದೆ. ಈ ಅಭಿಯಾನಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರ ಹೊರಹಾಕಿದ್ದಾರೆ.
ಹಲಾಲ್ ಚಿಕನ್ ಅನ್ನು ಹಿಂದೂಗಳು ಸ್ವೀಕಾರ ಮಾಡದಂತೆ ನಿರ್ಧಾರ ಮಾಡಿರುವುದು ತಪ್ಪಲ್ಲ. ಹಿಂದೂಗಳ ಈ ನಡೆಯಲ್ಲಿ ಯಾವುದೇ ತಪ್ಪಿಲ್ಲ. ಹಲಾಲ್ ಅಂಗಡಿಯನ್ನು ಬಂದ್ ಮಾಡಿ ಎಂದು ಹಿಂದೂಗಳು ಒತ್ತಾಯ ಮಾಡಿಲ್ಲ. ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ. ಕೋಳಿಯನ್ನು ಕಟ್ ಮಾಡುವ ರೀತಿ, ಅಲ್ಲಾನಿಕೆ ಸಮರ್ಪಣೆ ಮಾಡುವುದು ಇಸ್ಲಾಂ ಪದ್ಧತಿಯಂತೆ ನಡೆಯುತ್ತದೆ. ಹಿಂದೂ ಜನಜಾಗೃತಿ ಮೂಡಿಸುವುದು ತಪ್ಪಲ್ಲ, ಸರಿಯಾಗಿಯೇ ಇದೆ ಅಂತಾ ರಘುಪತಿ ಭಟ್ ಹೇಳಿದ್ದಾರೆ.
ಇದು 21ನೇ ಶತಮಾನ, ಸ್ವಲ್ಪನೂ ಕೂದಲು ತೋರಿಸೋದಿಲ್ಲವೆಂದರೆ ಹೇಗೆ?; ಶಾಸಕ ರಘುಪತಿ ಭಟ್
ರಾಜ್ಯದಲ್ಲಿ ಹಿಜಾಬ್, ವ್ಯಾಪಾರ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ. ನಮ್ಮ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ. ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ಇದಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಜಬರ್ದಸ್ತ್ ಆಗಿ ಬಂದ್ ಮಾಡಿಸಲಾಯಿತು. ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ. ಹಿಂದೂಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದರು.
2002ರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಿದರು. ಎರಡು ಸಮಾಜ ಒಟ್ಟಾಗಿ ಸೌಹಾರ್ದತೆಯಿಂದ ಹೋಗಬೇಕಾದ ಅವಶ್ಯಕತೆ ಇದೆ. ಮುಸಲ್ಮಾನ ಸಮಾಜ ಹಿಜಾಬ್ ವಿಚಾರವನ್ನು ಮೊದಲು ಕ್ಲಿಯರ್ ಮಾಡಿಕೊಳ್ಳಬೇಕು. ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗಲೂ ಅವರು ಧರ್ಮವೇ ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಾಗ ಹಿಂದೂಗಳು ಕೂಡ ತಮಗೆ ಧರ್ಮ ಮುಖ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ತಡೆ ವಿಚಾರವಾಗಿ ಮಾತನಾಡಿದ ಶಾಸಕ ರಘುಪತಿ ಭಟ್, ಮುಸಲ್ಮಾನ ಸಮಾಜ ಸ್ವಲ್ಪ ಸುಧಾರಣೆಯನ್ನು ಹೊಂದಬೇಕಾಗುತ್ತದೆ. ನಾವು ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ ಎಂದು ಅರಿತುಕೊಳ್ಳಬೇಕಾಗುತ್ತದೆ. ಸಮಾನತೆಯ ದೃಷ್ಟಿಯಿಂದ ಸಾರ್ವಜನಿಕವಾಗಿ ವರ್ತಿಸಬೇಕು ಎಂದು ಆಗ್ರಹಿಸಿದರು.
ಮುಸಲ್ಮಾನರು ಧರ್ಮಾಚರಣೆ ಮಾಡುವುದಕ್ಕೆ ಯಾವುದೇ ಆಕ್ಷೇಪಗಳು ಇಲ್ಲ. ಶಿಸ್ತು, ಸಮವಸ್ತ್ರ ಸಮಾನತೆಯನ್ನು ಎಲ್ಲರೂ ಪಾಲಿಸಬೇಕು. ಭಾರತದ ಪ್ರಜೆಯಾಗಿ ಅವರ ಕರ್ತವ್ಯ ಏನು ಎಂದು ಮೊದಲು ತಿಳಿದುಕೊಳ್ಳಬೇಕು. ಮುಸಲ್ಮಾನರು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ ಆದರೆ ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ. ಮುಸಲ್ಮಾನರು ಕರ್ತವ್ಯವನ್ನು ಮರೆತಿರುವುದರಿಂದ ಹಿಂದೂ ಸಮಾಜ ಜಾಗೃತವಾಗಿದೆ. ಹಿಂದೂ ಧರ್ಮೀಯರು ಯಾವಾಗಲೂ ಸಹಿಷ್ಣುಗಳು, ನಮ್ಮದು ವಸುದೈವ ಕುಟುಂಬಕಂ ಎಂದು ಹೇಳಿಕೊಂಡು ಬಂದಿರುವ ಧರ್ಮವಾಗಿದೆ. ಇತ್ತೀಚೆಗೆ ಅತಿರೇಕವಾಗಿ ನಡವಳಿಕೆಗಳು ಕಂಡ ಬಂದಾಗ ಈ ತರದ ಬೆಳವಣಿಗೆಗಳಾಗಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಇನ್ನು ಉಡುಪಿಯಲ್ಲಿ ಭಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್ ಕೂಡಾ ಹಲಾಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹಲಾಲ್ ಬಾಯ್ಕಾಟ್ ಅಭಿಯಾನ ಆರಂಭ ಆಗಿಲ್ಲ. ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಹಲಾಲ್ ಎನ್ನುವ ಹೆಸರನ್ನು ಇಟ್ಟು ವ್ಯಾಪಾರ ಕೇಂದ್ರೀಕೃತ ಮಾಡುವ ಮೂಲಕ ಸಂಚು ಬಯಲಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮೂರ್ನಾಲ್ಕು ವರ್ಷದ ಹಿಂದೆ ಎಚ್ಚರಿಕೆ ನೀಡಿತ್ತು. ಹಲಾಲ್ ಎನ್ನುವುದು ಬಹುದೊಡ್ಡ ಷಡ್ಯಂತ್ರವಾಗಿದೆ. ಇದರ ಹಿಂದೆ ಆರ್ಥಿಕ ವ್ಯವಸ್ಥೆಯ ಕೇಂದ್ರೀಕರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಮಾರುಕಟ್ಟೆಯಲ್ಲಿ ಹಲಾಲ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಖರೀದಿ ಎನ್ನುವ ವ್ಯವಸ್ಥೆ ನಡೆಯುತ್ತಿದೆ. ಹಲಾಲ್ ಮೂಲಕ ಕತ್ತನ್ನು ಸೀಳಿ ಪ್ರಾಣಿ ಬಲಿ ನಡೆಯುತ್ತೆ. ಇದು ವೈಜ್ಞಾನಿಕವಾಗಿ ದೇಹಕ್ಕೆ ಸಮಸ್ಯೆ ಎನ್ನುವುದು ನಿರೂಪಿತವಾಗಿದೆ. ಜಟ್ಕಾ ಈ ಹಿಂದಿನಿಂದಲೂ ನಡೆದುಬಂದ ಸರಿಯಾದ ಪ್ರಾಣಿಬಲಿಯಾಗಿದೆ. ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಮುಂದಿನ ದಿನಗಳಲ್ಲಿ ಹಲಾಲ್ ತೆಗೆದುಕೊಳ್ಳಲ್ಲ ಎನ್ನವ ನಿರ್ಧಾರ ಹಿಂದೂ ಸಮಾಜ ತೆಗೆದುಕೊಳ್ಳುತ್ತದೆ ಎಂದು ಸುನೀಲ್ ಕೆ.ಆರ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ರಾಜ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಮಾತನಾಡಿ, ಇದು ಸಮಾಜದಲ್ಲಿ ಪ್ರತಿಕ್ರಿಯಾತ್ಮಕವಾಗಿ ಆಗಿರುವ ಬೆಳವಣಿಗೆಯಾಗಿದೆ. ಈ ಅಭಿಯಾನದಿಂದ ದಿನನಿತ್ಯ ವ್ಯಾಪಾರ ಮಾಡಿ ಬದುಕುವ ಮುಸಲ್ಮಾನರಿಗೆ ತೊಂದರೆಯಾಗಿದೆ ಎನ್ನಲಾಗುತ್ತಿದೆ. ಮುಸಲ್ಮಾನರ ನಾಯಕತ್ವ ತೆಗೆದುಕೊಂಡು ರಾಜ್ಯದಲ್ಲಿ ನೇತೃತ್ವ ವಹಿಸಿಕೊಂಡವರು ಹಾಗೂ ಸಂಘಟನೆ ಮೂಲಕ ಮುಸಲ್ಮಾನರ ಧ್ವನಿಯಾಗಿ ಮಾತನಾಡುವವರು ಇದಕ್ಕೆ ಹೊಣೆಯಾಗಿದ್ದಾರೆ ಎಂದರು.
ನಮ್ಮ ವಿರುದ್ಧ ಚಟುವಟಿಕೆ ಮಾಡಿಕೊಂಡು ಸವಾಲು ಹಾಕುವ ಮೂಲಕ ಹಿಂದೂ ಧರ್ಮ ವಿರೋಧಿಸಿ, ಅಲ್ಲಾ ಒಬ್ಬನೇ ಎನ್ನುವವರು ನಮ್ಮ ದೇವಾಲಯದಲ್ಲಿ ವ್ಯಾಪಾರ ಮಾಡಬಾರದು. ಇಸ್ಲಾಂ ನಾಯಕತ್ವ ವಹಿಸಿಕೊಂಡವರು ಆತ್ಮಾವಲೋಕನ ಮಾಡಬೇಕಿದೆ. ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಕೇಶವ ಹೆಗ್ಡೆ ಹೇಳಿದ್ದಾರೆ.
ದೇಶದಲ್ಲಿ ಹಲಾಲ್ ಎನ್ನುವುದು ಮುಸ್ಲಿಮರ ಒಂದು ದೊಡ್ಡ ಜಾಲವಾಗಿದೆ. ಹಲಾಲ್ ಸರ್ಟಿಫಿಕೇಟ್ ಅಗತ್ಯ ಎನ್ನುವ ವಾತಾವರಣ ನಿರ್ಮಾಣ ಆಗುತ್ತಿದೆ. ಒಂದು ಮುಸ್ಲಿಂ ಸಮುದಾಯಕ್ಕೆ ಹಲಾಲ್ ಅನಿವಾರ್ಯ ಇರಬಹುದು. ಆದರೆ ಶೇ.೮೫ ಹಿಂದೂ ಸಮಯದಾಯಕ್ಕೆ ಹಲಾಲ್ ಅಗತ್ಯ ಇಲ್ಲ. ಹಲಾಲ್ ಎಲ್ಲರ ಮೇಲೆ ಹೇರಬಾರದು, ಹಿಂದೂಗಳು ಹಲಾಲ್ ಸರ್ಟಿಫಿಕೇಟ್ ಇಲ್ಲದ ಜಟ್ಕಾ ಪದ್ದತಿಯ ಮಾಂಸವನ್ನಷ್ಟೇ ಸೇವಿಸುತ್ತೇವೆ. ಹಾಗಾಗಿ ಹಲಾಲ್ ಅಗತ್ಯ ಇಲ್ಲ ಎನ್ನುವ ಜಾಗೃತಿ ಸಮಾಜದಲ್ಲಿ ನಿರ್ಮಾಣ ಆಗುತ್ತಿದೆ.
ಯುಗಾದಿಯ ಮರುದಿನ ಅತೀ ಹೆಚ್ಚು ಮಾಂಸ ಖರೀದಿ ನಡೆಯಲಿದೆ. ಆ ವೇಳೆ ಜಟ್ಕಾ ಪದ್ದತಿಯ ಮಾಂಸವನ್ನಷ್ಟೇ ಖರೀದಿಸುತ್ತೇವೆ. ಹಲಾಲ್ ಅವಶ್ಯಕತೆ ಇಲ್ಲ ಎನ್ನುವ ಚರ್ಚೆ ನಡೆಯುತ್ತಿದೆ. ಮುಸ್ಲಿಂ ಜಿಹಾದಿ ಮಾನಸಿಕತೆ ಹಲಾಲ್ ಮೂಲಕ ಆರ್ಥಿಕ ಕ್ಷೇತ್ರವನ್ನು ಕಪಿಮುಷ್ಠಿಯಲ್ಲಿ ಇಡುವ ಕಾರ್ಯ ತಡೆಯಬೇಕಿದೆ. ರೈಲು ಹಾಗೂ ಸೈನ್ಯಕ್ಕೆ ಕಳುಹಿಸುವ ಮಾಂಸ ಹಲಾಲ್ ಆಗಿ ಹೋಗುತ್ತಿದೆ. ಮುಸ್ಲಿಂ ವ್ಯಾಪಾರ ಬಹಿಷ್ಕಾರ ವಾತಾವರಣ ಮುಸ್ಲಿಮರು ಇಡೀ ಸಮಾಜದ ಜೊತೆ ಬದುಕುವ ನಿಲುವು ತಾಳುವವರೆಗೂ ಮುಂದುವರೆಯುತ್ತದೆ ಅಂತಾ ಕೇಶವ್ ಹೆಗ್ಡೆ ಹೇಳಿದ್ದಾರೆ.