ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ, 3 ಪೊಲೀಸರು ಸಸ್ಪೆಂಡ್
ಉಡುಪಿ, ಆಗಸ್ಟ್ 22: ರಾಜ್ಯದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹೋಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ರಾಜಾತಿಥ್ಯ ನೀಡಲಾಗಿತ್ತು. ಇದೀಗ ರಾಜಾತಿಥ್ಯ ನೀಡಿದ ಮೂರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಇಲಾಖೆ ಅಮಾನತು ಮಾಡಿದೆ.
ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ , ನವನೀತ್ ಮತ್ತು ನಿರಂಜನ್ ಭಟ್ ರನ್ನು ಸೋಮವಾರ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜಾಮೀನು ಪಡೆದು ಹೊರಬಂದ ಶ್ರೀನಿವಾಸ್ ಭಟ್ ಕೂಡಾ ಹಾಜರಾಗಿದ್ದರು.

ಆದರೆ ಕೋರ್ಟಿಗೆ ಹಾಜರಾಗಿದ್ದ ಆರೋಪಿಗಳನ್ನು ಮಂಗಳೂರು ಜೈಲಿನಿಂದ ಕರೆತರುವಾಗ ಐಷಾರಾಮಿ ಟೂರಿಸ್ಟ್ ಇನ್ನೋವಾ ಕಾರಿನಲ್ಲಿ ಕರೆತರಲಾಗಿತ್ತು. ಆರೋಪಿಗಳನ್ನು ಐಷಾರಾಮಿ ವಾಹನದಲ್ಲಿ ಕರೆತಂದಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿತ್ತು.
ಸದ್ಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಜೈಲಿನಲ್ಲಿ ಪಂಚತಾರಾ ಆತಿಥ್ಯ ವಿಚಾರವನ್ನು ಗಮನಿಸಿದಾಗ ಉಡುಪಿಯಲ್ಲೂ ಈ ರೀತಿಯ ಆತಿಥ್ಯ ದೊರೆಯುತ್ತಿದೆಯೇ ಎಂಬ ಸಂಶಯ ಜನರಲ್ಲಿ ಮೂಡಿತ್ತು.
ಹಣ ಬಲದಿಂದ ಆರೋಪಿಗಳು ಯಾವುದೇ ಆತಂಕವಿಲ್ಲದೆ ಜೈಲಿನಲ್ಲಿದ್ದಾರೆ ಅನುಮಾನ ಮೂಡಿತ್ತು.ಈ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯ ಹೆಚ್ಚಾಗುತಿದ್ದಂತೆ ಉಡುಪಿ ಎಸ್ಪಿ ಡಾ ಸಂಜೀವ ಪಾಟೀಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದರು.
ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆಯ ನಂತರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುಧಾಕರ್, ರೇಣುಕಾ ಹಾಗೂ ಸಲ್ಮಾನ್ ಖಾನ್ ಅವರನ್ನು ಅಮಾನತು ಮಾಡಿ ಉಡುಪಿ ಎಸ್ಪಿ ಡಾ ಸಂಜೀವ ಪಾಟೀಲ್ ಆದೇಶ ಹೊರಡಿಸಿದ್ದಾರೆ .
2016ರ ಜುಲೈ ತಿಂಗಳಿನಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಸ್ವಂತ ಪತ್ನಿ ಹಾಗು ಮಗನೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಪ್ರಕರಣದಲ್ಲಿ ಜಾಮೀನಿಗಾಗಿ ಆರೋಪಿಗಳು ಹಲವು ಬಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ.












Click it and Unblock the Notifications