ರಾಹುಲ್ ಗಾಂಧಿಗೆ ಬಚ್ಚಾ ಎಂದ ಬಿಎಸ್ ವೈ
ಉಡುಪಿ, ಫೆ. 21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಚ್ಚಾ ಎಂದು ಸಂಬೋಧಿಸಿದ್ದಾರೆ.
ಉಡುಪಿಯಲ್ಲಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, "ಆ ಬಚ್ಚಾ (ರಾಹುಲ್ ಗಾಂಧಿ) ನನ್ನು ಕರ್ನಾಟಕಕ್ಕೆ ಕರೆ ತರುವ ಮೂಲಕ ನಾವು ಈಗ 150 ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ," ಎಂದು ಹೇಳಿದರು.

ತಿರುಕನ ಕನಸು
ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯನವರದ್ದು ತಿರುಕನ ಕನಸು ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಲೇವಡಿಮಾಡಿದರು.
"ಸಿದ್ದರಾಮಯ್ಯ ನೀವು ಸೊಕ್ಕಿನಿಂದ, ಧಿಮಾಕಿನಿಂದ ಮಾತನಾಡಬೇಡಿ. ನಿಮಗಿರುವುದು ಇನ್ನೆರಡೇ ತಿಂಗಳು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಮುಖ್ಯಮಂತ್ರಿಗಳಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ರಾಹುಲ್ ಗೆ ದೇವಾಲಯಗಳ ನೆನಪಾಗಿದೆ
ಅಮಿತ್ ಶಾ ಉಪಸ್ಥಿತಿಯಲ್ಲಿ ಮಾತನಾಡಿದ ಯಡಿಯೂರಪ್ಪ ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧವೂ ಕಿಡಿಕಾರಿದರು. "ದಿಲ್ಲಿಯಲ್ಲಿ ಒಂದೂ ದೇವಸ್ಥಾನಕ್ಕೆ ಹೋಗದ ರಾಹುಲ್ ಗಾಂಧಿಗೆ ಈಗ ದೇಗುಲಗಳ ನೆನಪಾಗಿದೆ," ಎಂದು ವ್ಯಂಗ್ಯವಾಡಿದರು. ಮಾತ್ರವಲ್ಲ ಅವರು ಕರ್ನಾಟಕಕ್ಕೆ ಬಂದಿರುವುದರಿಂದ ನಾವು 150ಕ್ಕೂ ಹೆಚ್ಚು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದ್ದೇವೆ ಎಂದು ಹೇಳಿದರು.

ಗೂಂಡಾಗಿರಿಗೆ ಪೋಷಣೆ
ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ವಿದ್ವತ್ ಮೇಲೆ ನಡೆಸಿದ ಹಲ್ಲೆ ಘಟನೆಯ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರಕಾರ ಗೂಂಡಾಗಿರಿಯನ್ನು ಪೋಷಿಸುತ್ತಿದೆ ಎಂದು ಆರೋಪಿಸಿದರು.
"ಸಿದ್ದರಾಮಯ್ಯ ಸರ್ಕಾರದ ಭ್ರಷ್ಟತೆ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಲೂಟಿಕೋರ ಶಾಸಕ ಬಸವರಾಜ್ ಶಿಷ್ಯ ನಾರಾಯಣ ಸ್ವಾಮಿ ಸರ್ಕಾರಿ ಕಚೇರಿಯಲ್ಲಿ ಪೆಟ್ರೋಲ್ ಎರಚಿದರೂ ಯಾಕೆ ಬಂಧಿಸಿಲ್ಲ? ವಿದ್ವತ್ ಮೇಲೆ ಹಲ್ಲೆ ನಡೆಸಿದವರಿಗೆ ಸರ್ಕಾರ ಸಹಕಾರ ಕೊಡುತ್ತಿದೆ. ದರ್ಪ ತೋರಿಸುವವರು, ಲೂಟಿಕೋರರನ್ನು ಸಿಎಂ ಜೊತೆಗಿಟ್ಟಿಕೊಂಡಿದ್ದಾರೆ. ಪಕ್ಕದಲ್ಲೇ ಇರುವ ಗೂಂಡಾಗಳ ಬಗ್ಗೆ ಸಿದ್ದರಾಮಯ್ಯರಿಗೆ ಏನು ಅನಿಸುತ್ತಿಲ್ಲವಾ?" ಎಂದು ಪ್ರಶ್ನಿಸಿದರು.

ಉಡುಪಿ ಬಿಜೆಪಿ ವೆಬ್ಸೈಟಿಗೆ ಚಾಲನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, "ಜನರ ಆಕ್ರೋಶವನ್ನು ಬಳಸಿಕೊಳ್ಳಲು ಇದು ಸಕಾಲ. ಸಿಟ್ಟಲ್ಲಿರುವ ಜನರು ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸುವಂತೆ ಮಾಡಬೇಕಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವಂತೆ ಮಾಡಬೇಕಿದೆ," ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು www.bjpudupi.org ವೆಬ್ಸೈಟನ್ನೂ ಅನಾವರಣ ಮಾಡಿದರು.












Click it and Unblock the Notifications