ವೀರಶೈವ, ಲಿಂಗಾಯತರು ಹಿಂದೂಗಳೇ: ಪೇಜಾವರ ಶ್ರೀ
ಉಡುಪಿ, ಆಕ್ಟೋಬರ್ 17: ಶಿವನನ್ನೇ ಸರ್ವೋತ್ತಮ ಎನ್ನುವಾಗ, ಪಂಚಾಕ್ಷರಿ ಜಪ,ಲಿಂಗ ಪೂಜೆಗಳನ್ನೂ ಮಾಡುವ ಮೂಲಕ ಎಲ್ಲವನ್ನೂ ಒಪ್ಪಿಕೊಂಡ ಬಳಿಕ ಹಿಂದೂಗಳಲ್ಲ ಎನ್ನೋದು ಹೇಗೆ? ಶಿವನ ಪೂಜೆ ಮಾಡುವ ಲಿಂಗಾಯತರು ಹಿಂದೂಗಳೇ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಾಧ್ವರಿಗೆ ಮಾದಿಗ ದೀಕ್ಷೆ ನೀಡುವಂತೆ ಪೇಜಾವರ ಶ್ರೀಗೆ ಸವಾಲು
ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವೀರಶೈವ ಹಾಗೂ ಲಿಂಗಾಯತ ಧರ್ಮಗಳ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ವೀರಶೈವ ಲಿಂಗಾಯತ ಕುರಿತ ವಿಚಾರ ಅವರ ಆಂತರಿಕ ವಿಷಯವಾಗಿದೆ. ಅದರ ಬಗ್ಗೆ ತಾನು ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಹೊರಗಿನ ವ್ಯಕ್ತಿಯಾಗಿ ಎಲ್ಲರೂ ಒಂದಾಗಿ ಇರಬೇಕು ಎನ್ನುವ ಸಲಹೆಯನ್ನು ಮಾತ್ರ ನೀಡಬಲ್ಲೆ ಎಂದು ಅವರು ಹೇಳಿದರು. ಒಂದಾಗಿ ಇರುವುದರಿಂದ ಲಿಂಗಾಯತ ಸಮಾಜಕ್ಕೆ ಬಲ ಬರುತ್ತದೆ. ಈ ಎರಡೂ ಸಮಾಜ ತಮ್ಮನ್ನು ಹಿಂದೂ ಧರ್ಮದಿಂದ ಬೇರೆ ಎಂದು ಕರೆದುಕೊಳ್ಳುವುದು ಸರಿಯಲ್ಲ.
ಶಿವನನ್ನೇ ಸರ್ವೋತ್ತಮ, ಪಂಚಾಕ್ಷರಿ ಜಪ,ಲಿಂಗ ಪೂಜೆಗಳನ್ನೂ ಮಾಡುವ ಮೂಲಕ ಎಲ್ಲವನ್ನೂ ಒಪ್ಪಿಕೊಂಡ ಬಳಿಕ ಹಿಂದೂಗಳಲ್ಲ ಎನ್ನೋದು ಹೇಗೆ ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಈ ಹಿಂದಿನ ಪ್ರಶ್ನೆಯನ್ನೇ ಪುನರುಚ್ಛರಿಸಿದರು.
ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರೇ ಕಾರಣ ಎನ್ನುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಹಳೇ ಕಾಲದಲ್ಲಿ ಬ್ರಾಹ್ಮಣರು ಮಾಡಿದ ತಪ್ಪಿಗೆ ಈಗಿನ ಬ್ರಾಹ್ಮಣರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ ಅವರು ಹಿಂದೆ ಆದ ಆನ್ಯಾಯಕ್ಕೆ ಈಗ ಬ್ರಾಹ್ಮಣರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.