ಕೊಲ್ಲೂರು ದೇಗುಲದ ಲಕ್ಷ್ಮೀ ಮಂಟಪ ಪ್ರವೇಶಿಸಿದ ಮಹಿಳೆ ಮೇಲೆ ಕಿಡಿಕಾರಿದ ಭಕ್ತರು
Recommended Video

ಉಡುಪಿ, ಅಕ್ಟೋಬರ್. 17: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಕೇರಳ ಸೇರಿದಂತೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೇ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ಮಹಿಳಾ ಅಧಿಕಾರಿ ಒಬ್ಬರು ಪ್ರವೇಶಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಹಿಳಾ ಅಧಿಕಾರಿ ಲಕ್ಷ್ಮಿ ಮಂಟಪ ಪ್ರವೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ದೇವಾಲಯದ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮಹಿಳಾ ಅಧಿಕಾರಿ ಲಕ್ಷ್ಮಿ ಮಂಟಪ ಪ್ರವೇಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಕ್ಷೇತ್ರದ ಭಕ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದೆ ಓದಿ...

ಈ ಸಂದರ್ಭದಲ್ಲಿ ಮಾತ್ರ ಪ್ರವೇಶವಿದೆ
ದಸರಾದ ನವರಾತ್ರಿ ಸಂದರ್ಭದಲ್ಲಿ ಕೊಲ್ಲೂರಿನಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿಯ ಮೊದಲ ದಿನ ಒಬ್ಬರಿಗೆ, ಎರಡನೇ ದಿನ ಇಬ್ಬರಿಗೆ ಹೀಗೆ ಕ್ರಮವಾಗಿ ನೀಡುತ್ತಾ ಬಂದು ಕೊನೆ 9ನೇ ದಿನ ಗ್ರಾಮದ 9 ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು.

ಅಪಚಾರ ಆಗಿದೆ ಎಂಬ ಆರೋಪ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದರಿಂದ ಅಪಚಾರ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ದೇವಳದ ಸಿಬ್ಬಂದಿಯಿಂದ ಅಕ್ರಮ
ಶ್ರೀ ಕ್ಷೇತ್ರದ ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಉಮಾ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಅನೇಕ ಅಕ್ರಮಗಳನ್ನು ಎಸಗಿದ್ದರು ಎಂದು ಆರೋಪಿಸಲಾಗಿದೆ. ಉಮಾ ಅವರ ಅಧಿಕಾರ ಅವಧಿಯಲ್ಲಿ ಭಕ್ತರೊಬ್ಬರು ಹರಕೆಯಾಗಿ ನೀಡಿದ್ದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಅಕ್ರಮ ಎಸಗಿರುವುದು ಬಯಲಾಗಿತ್ತು.

ಅರ್ಚಕರ ನಡೆಯ ವಿರುದ್ಧ ಕಿಡಿ
ಉಮಾ ಈ ಹಿಂದೆ ದೇವಾಲಯದ ಆಡಳಿತಾಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ದೇವಾಲಯದ ಕೆಲ ಅರ್ಚಕರು ಅವರಿಗೆ ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ನೋಡಿದ ಮತ್ತೊಂದು ಅರ್ಚಕರ ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಕ್ಷೇತ್ರದ ಭಕ್ತರು ಕೂಡ ಅರ್ಚಕರ ನಡೆಯ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications