ಉಡುಪಿ; ತುರ್ತು ಸೇವೆಗೆ ಸಿದ್ಧಗೊಂಡಿವೆ 12 ERSS ವಾಹನಗಳು
ಉಡುಪಿ, ಜನವರಿ 24: ಉಡುಪಿಯಲ್ಲಿ 12 ಇಆರ್ಎಸ್ಎಸ್ ಪೊಲೀಸ್ ವಾಹನಗಳಿಗೆ ಚಾಲನೆ ನೀಡಲಾಯಿತು. ಜನರು ಟೋಲ್ ಫ್ರೀ ನಂಬರ್ 100ರ ಬದಲಾಗಿ 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತಿ ಸಮೀಪ ಇರುವ ಇಆರ್ಎಸ್ಎಸ್ ವಾಹನ ಬಂದು ಸೇವೆಯನ್ನು ನೀಡಲಿದೆ.
ಶನಿವಾರ ಉಡುಪಿಯ ಸಿಂಡಿಕೇಟ್ ಸರ್ಕಲ್ ಬಳಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ 12 ಇಆರ್ಎಸ್ಎಸ್ ವಾಹನಗಳಿಗೆ ಹಸಿರು ನಿಶಾನೆಯನ್ನು ತೋರಿಸಿದರು. ಎಲ್ಲಾ ಜಿಲ್ಲೆಗಳಿಗೂ ಈ ವಾಹನಗಳನ್ನು ನೀಡಲಾಗಿದ್ದು, ಜನರ ಸೇವೆಗೆ ಮುಕ್ತವಾಗುತ್ತಿವೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ವಿಷ್ಣುವರ್ಧನ್, "ಟೋಲ್ ಫ್ರೀ ನಂಬರ್ 112 ನೇರವಾಗಿ ಬೆಂಗಳೂರು ಕೇಂದ್ರದ ನಿಯಂತ್ರಣದಲ್ಲಿದೆ. ಕರೆ ಬಂದ ಸ್ಥಳಕ್ಕೆ ಕ್ಷಿಪ್ರವಾಗಿ ಅಗತ್ಯ ಸೇವೆಯನ್ನು ಸಲ್ಲಿಸಲು ಪ್ರತಿ ವಾಹನದಲ್ಲಿ ಓರ್ವ ಎಎಸ್ಐ ದರ್ಜೆಯ ಪೊಲೀಸ್ ಅಧಿಕಾರಿ ಇರುತ್ತಾರೆ. ಈ ವಾಹನಗಳು ಹೆಚ್ಚಿನ ಅಪರಾಧಗಳು ನಡೆದ ಸ್ಥಳಗಳು, ಶಾಲಾ, ಕಾಲೇಜುಗಳ ಸಮೀಪ, ಜನದಟ್ಟಣೆ ಪ್ರದೇಶ, ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿವೆ" ಎಂದರು.

ಇಆರ್ಎಸ್ಎಸ್ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ನಾಯಕ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಗೌಡ ಮೊದಲಾದವರು ಹಾಜರಿದ್ದರು.












Click it and Unblock the Notifications