ಕಷ್ಟ ಹೇಳಿಕೊಂಡ ಶಾಸಕ: 'ಸುಮ್ಮನಿರ್ರಿ' ಎಂದ ಯಡಿಯೂರಪ್ಪ
ತುಮಕೂರು, ಅಕ್ಟೋಬರ್ 18: ಸಿಎಂ ಯಡಿಯೂರಪ್ಪ ಅವರ ಮುಂದೆ ತುಂಬಿದ ವೇದಿಕೆಯಲ್ಲಿ ಕ್ಷೇತ್ರದ ಕಷ್ಟ ಹೇಳಿಕೊಂಡ ಶಾಸಕನನ್ನು 'ಸಾಕು ಸುಮ್ಮನಾಗ್ರಿ' ಎಂದು ಯಡಿಯೂರಪ್ಪ ಗದರಿದ್ದಾರೆ.
ತುಮಕೂರಿನ ಕುಣಿಗಲ್ ಸಮೀಪದ ಎಡೆಯೂರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗಿ ಆಗಿದ್ದರು. ಇದೇ ಕಾರ್ಯಕ್ರಮದಲ್ಲಿ ಕುಣಿಗಲ್ನ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರು ಕ್ಷೇತ್ರದ ಸಮಸ್ಯೆಗಳನ್ನು ವೇದಿಕೆ ಮೇಲೆ ಯಡಿಯೂರಪ್ಪ ಗಮನಕ್ಕೆ ತರುವ ಯತ್ನ ಮಾಡಿದರು.
ಮೈತ್ರಿ ಸರ್ಕಾರವಿದ್ದಾಗ ಕುಣಿಗಲ್ ಕ್ಷೇತ್ರ ಅಭಿವೃದ್ಧಿಗೆ 720 ಕೋಟಿ ಅನುದಾನ ನೀಡಲಾಗಿತ್ತು, ಆದರೆ ಅದನ್ನು ತಡೆಹಿಡಿಯಲಾಗಿದೆ. ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಗೊತ್ತಿಲ್ಲ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
'ಎಡೆಯೂರು ನಿಮ್ಮ ಮನೆ ದೇವರು, ದೇವರು ಇರುವ ಕ್ಷೇತ್ರ ಕುಣಿಹಲ್ ಈ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಎಕ್ಸ್ಪ್ರೆಸ್ ಕೆನಾಲ್ ಯೋಜನೆ ವಿಚಾರದಲ್ಲಿ ಅನ್ಯಾಯವಾಗಿದೆ. ನೀರಾವರಿ ವಿಷಯದಲ್ಲಿ ಕಳೆದ 25 ವರ್ಷದಿಂದಲೂ ಕ್ಷೇತ್ರಕ್ಕೆ ಅನ್ಯಾಯವಾಗಿದೆ' ಎಂದು ಶಾಸಕ ರಂಗನಾಥ್ ಮಾತು ಮುಂದುವರೆಸಿದರು.

'ಆಯ್ತು ಸಾಕು ಮುಗಿಸ್ರಿ' ಎಂದು ಗದರಿದ ಯಡಿಯೂರಪ್ಪ
ಈ ನಡುವೆ ಶಾಸಕರನ್ನು ತಡೆದ ಯಡಿಯೂರಪ್ಪ, 'ಆಯ್ತು ರೀ ಸಾಕು ಮುಗಿಸ್ರಿ' ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಂಗನಾಥ್, 'ಎರಡು ನಿಮಿಷ ಕೊಡಿ ಮುಗಿಸ್ತೇನೆ' ಎಂದು ಹೇಳಿ ಮಾತು ಮುಂದುವರೆಸಿದರು.

ಹಣಕಾಸು ಸ್ಥಿತಿ ಬಗ್ಗೆ ನನಗೆ ಮಾತ್ರವೇ ಗೊತ್ತು: ಯಡಿಯೂರಪ್ಪ
ರಂಗನಾಥ್ ಮಾತಿನ ನಂತರ ಮಾತನಾಡಿದ ಯಡಿಯೂರಪ್ಪ, 'ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ ಎಂದು ನನಗೆ ಮಾತ್ರ ಗೊತ್ತಿದೆ, ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುವ ವ್ಯಕ್ತಿ ನಾನಲ್ಲ, ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಭವಿಷ್ಯದಲ್ಲಿ ನೀರಾವರಿಗೆ ಹಾಗೂ ಅಭಿವೃದ್ಧಿ ಯೋಜನೆಗೆ ಹಣಕಾಸು ನೀಡುತ್ತೇನೆ' ಎಂದು ಹೇಳಿದರು.

ಮೈತ್ರಿ ಸರ್ಕಾರ ಸರಿಯಾಗಿ ಯೋಜನೆ ಮಾಡಿಲ್ಲ: ಯಡಿಯೂರಪ್ಪ
'ಹಿಂದಿನ ಸರ್ಕಾರವು ಹಣಕಾಸಿನ ಸ್ಥಿತಿ ಅರಿವಿಲ್ಲದೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಇನ್ನೂ ಐದಾರು ವರ್ಷ ಹಣಕಾಸು ಕ್ರೂಡೀಕರಣ ಮಾಡಿದರೂ ಅಭಿವೃದ್ಧಿ ಕಾರ್ಯ ಪೂರೈಸುವುದು ಕಷ್ಟ ಎಂದು ಯಡಿಯೂರಪ್ಪ ಹೇಳಿದರು.

ನೆರೆ ಪರಿಸ್ಥಿತಿ ಕಡೆ ಹೆಚ್ಚಿನ ಗಮನ: ಯಡಿಯೂರಪ್ಪ
ನೆರೆ ಪರಿಸ್ಥಿತಿ ಇರುವ ಕಡೆಗಳಲ್ಲಿ ಸರ್ಕಾರವು ಹೆಚ್ಚಿನ ಹಣಕಾಸು ಖರ್ಚು ಮಾಡುತ್ತಿದೆ, ಅಲ್ಲಿನ ಪರಿಹಾರ ಕಾರ್ಯ, ಪುನರ್ವಸತಿ ಇನ್ನಿತರೆ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನವಹಿಸಿದೆ ಹಾಗಾಗಿ ಉಳಿದ ಕ್ಷೇತ್ರಗಳತ್ತ ಸೂಕ್ತಗಮನ ವಹಿಸಲಾಗಿಲ್ಲವೆಂದು ಸಬೂಬು ಹೇಳಿದರು.












Click it and Unblock the Notifications