ಯಡಿಯೂರಪ್ಪ ಶಕ್ತಿ ಕುಂದಿದೆ, ನಾಯಕತ್ವದ ಬಗ್ಗೆ ಮಾಜಿ ಸಚಿವ ಅಪಸ್ವರ
ತುಮಕೂರು, ನವೆಂಬರ್ 7: ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ ಕಾರಣದಿಂದಲೇ ಬಿಜೆಪಿಯು ಇಂಥ ಸೋಲು ಕಾಣಬೇಕಾಯಿತು ಎಂದು ಮಾಜಿ ಸಚಿವ- ಬಿಜೆಪಿ ಮುಖಂಡ ಸೊಗಡು ಶಿವಣ್ಣ ಬುಧವಾರ ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಆರು ಲಕ್ಷ ಮಂದಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಎಲ್ಲರನ್ನೂ ಕಡೆಗಣಿಸಲಾಗಿದೆ. ಈಗಂತೂ ಬಿಜೆಪಿ ಹಲವು ಸಂಸ್ಥಾನಗಳಾಗಿ ಮಾರ್ಪಾಟಾಗಿದೆ. ಬಳ್ಳಾರಿ, ಮೈಸೂರು, ಬೆಂಗಳೂರು, ಶಿವಮೊಗ್ಗ ಹೀಗೆ ಹಲವು ಸಂಸ್ಥಾನಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ನನ್ನ ಬಿಟ್ರೆ ಇನ್ನಾರಿದ್ದಾರೆ? ಹೈಕಮಾಂಡಿಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ
ಯಾವ ನಾಯಕರೂ ಇಡೀ ರಾಜ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಲ್ಲ ಎಂದು ಹೇಳಿದ ಅವರು, ಈ ಹಿಂದೆ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ಗಡ ಗಡ ಎನ್ನುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಅವರ ಶಕ್ತಿ ಕಡಿಮೆ ಆಗುತ್ತಿದೆ ಎಂಬ ಅಭಿಪ್ರಾಯ ಪಟ್ಟರು.
5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು
ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಬಿಜೆಪಿಯ ನಾಯಕತ್ವ ಬದಲಾವಣೆ ಮಾಡಬೇಕಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೊಗಡು ಶಿವಣ್ಣ, ಬದಲಾವಣೆ ವಿಚಾರವಾಗಿ ನಾನು ಏನನ್ನೂ ಹೇಳಲ್ಲ. ಆದರೆ ಯಡಿಯೂರಪ್ಪ ಅವರ ಶಕ್ತಿ ಕುಂದುತ್ತಿದೆ. ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಿಸುವಾಗ ಯಾರನ್ನೂ ಕೇಳಿರಲಿಲ್ಲ. ಆದರೂ ನಾವೆಲ್ಲ ಒಪ್ಪಿದೆವು ಎಂದು ಹೇಳಿದ್ದಾರೆ.