ತುಮಕೂರು: ಸ್ವಂತ ಹಣವನ್ನು ಜನರಿಗಾಗಿ ಮೀಸಲಿಟ್ಟು ರಸ್ತೆ ಸರಿ ಮಾಡಿಸಿದ ರೈತ
ತುಮಕೂರು, ನ.16: ಇಂದಿನ ಜನಪ್ರತಿನಿಧಿಗಳು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ಅಷ್ಟರಲ್ಲೇ ಇದೆ. ಯಾವುದೇ ಜನಪ್ರತಿನಿಧಿ ತಾನು ಕೊಟ್ಟ ಭರವಸೆಯ ಅರ್ಧದಷ್ಟು ಪೂರ್ತಿ ಮಾಡುವುದು ಕೂಡ ಕನಸಾಗಿದೆ. ಇಂಥ ಸಮಯದಲ್ಲಿ ತಾನು ಕೊಟ್ಟ ಭರವಸೆಯನ್ನು ಈಡೇರಿಸಲು ಕೊಬ್ಬರಿ ಮಾರಿ ಜನರಿಗಾಗಿ ರಸ್ತೆ ನಿರ್ಮಿಸಿದ್ದಾರೆ ರೈತನಾಗಿರುವ ಗ್ರಾಮ ಪಂಚಾಯಿತಿ ಸದಸ್ಯ.
ಇದು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ನಡೆದಿರುವ ಘಟನೆ. ಇಲ್ಲಿನ ರೈತ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಅರೇಹಳ್ಳಿ ನಂಜೇಗೌಡ ನಟರಾಜು ಎಂಬುವವರು ತಾನು ದುಡಿದ ಹಣದಿಂದ 1.5 ಲಕ್ಷ ರೂಪಾಯಿ ವ್ಯಯಿಸಿ ಗ್ರಾಮದ ರಸ್ತೆಯನ್ನು ನವೀಕರಣಗೊಳಿಸಿದ್ದಾರೆ.
Breaking; ಕಾಂಗ್ರೆಸ್ನತ್ತ ಹೊರಟ ತುಮಕೂರಿನ ಜೆಡಿಎಸ್ ನಾಯಕ
ಎರಡು ದಶಕಗಳಿಂದ ಚುನಾಯಿತ ಪ್ರತಿನಿಧಿಗಳು ರಸ್ತೆಯನ್ನು ದುರಸ್ತಿ ಮಾಡದ ಕಾರಣ ಇತ್ತಿಚೇಗೆ ಶಿವನೇಹಳ್ಳಿ ರಸ್ತೆಯಲ್ಲಿ ಗುಂಡಿಯನ್ನು ತಪ್ಪಿಸಲು ಹೋಗಿ ಕಂದಾಯ ಇಲಾಖೆಯ ಗುಮಾಸ್ತರಾಗಿದ್ದ ನಾರಾಯಣಪ್ಪ ಎಂಬುವವರು ಸಾವನ್ನಪ್ಪಿದ್ದರು. ಇದನ್ನು ಕಂಡು ನಟರಾಜು ರಸ್ತೆ ದುರಸ್ತಿಗೆ ಇಳಿದಿದ್ದಾರೆ.
ತಮ್ಮ ತೋಟದಲ್ಲಿ ಬೆಳೆದ ಕೊಬ್ಬರಿಯನ್ನು ಮಾರಿ ಬಂದ ಹಣದಲ್ಲಿ ಗ್ರಾಮದ ಸುಮಾರು 400 ಮೀಟರ್ ಉದ್ದದ ರಸ್ತೆಯಲ್ಲಿ ಇದ್ದ ಗುಂಡಿಗಳನ್ನು ಮುಚ್ಚಿಸಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದು ಮತದಿಂದ ಸೋಲು ಕಂಡಿದ್ದ ನಟರಾಜು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯ ಅವರ ಗೆಲುವನ್ನು ಘೋಷಿಸಿದೆ. ತಾನು ಇರುವುದು ಜನಸೇವೆ ಮಾಡಲು ಎಂದು ಹೇಳಿಕೊಳ್ಳುವ ನಟರಾಜು, ಮುಂದೆ ತಾಲೂಕು, ಜಿಲ್ಲಾ ಪಂಚಾಯಿತಿಗಳ ಮೇಲೆ ಕಣ್ಣಿಟ್ಟಿದ್ದಾರೆ.
ನಟರಾಜು ಅವರಿಗೆ ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿಗೆ ಬಡ್ತಿ ನೀಡುವಂತೆ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಂತೆ ನಟರಾಜು ಅವರ ಜೆಡಿಎಸ್ ಪಕ್ಷದೊಂದಿಗೆ ಲಾಬಿ ಆರಂಭಿಸಿದ್ದಾರೆ.