ತುಮಕೂರಿನಲ್ಲಿ ಭೀಕರ ಅಪಘಾತ: ಕ್ರೂಸರ್ಗೆ ಟ್ರಕ್ ಡಿಕ್ಕಿ- 9 ಸಾವು, 14 ಮಂದಿ ಗಾಯ
ತುಮಕೂರು ಆಗಸ್ಟ್ 25: ಕರ್ನಾಟಕದ ತುಮಕೂರಿನಲ್ಲಿ ಕ್ರೂಸರ್ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡ ಘಟನೆ ನಡೆದಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರು ರಾಯಚೂರಿನ ದಿನಗೂಲಿ ಕಾರ್ಮಿಕರಾಗಿದ್ದು, ಬೆಂಗಳೂರು ಕಡೆಗೆ ಹೋಗುತ್ತಿದ್ದರು.
ಡೆಲಿವರಿ ಕೆಲಸಗಳಲ್ಲಿ ದೈನಂದಿನ ಕನಿಷ್ಠ ಗ್ಯಾರಂಟಿ ಮತ್ತು ವಾರದ ಪ್ರೋತ್ಸಾಹ ಧನನೊಂದಿಗೆ 30,000 ವರೆಗೆ ಗಳಿಸಿ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಕ್ರೂಸರ್ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತರು ರಾಯಚೂರು ಜಿಲ್ಲೆಯವರಾಗಿದ್ದು, ಕ್ರೂಸರ್ ನಲ್ಲಿ 20 ಮಂದಿ ಇದ್ದರೆಂದು ತಿಳಿದು ಬಂದಿದೆ. ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 9 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ರಾಯಚೂರು ಜಿಲ್ಲೆಯ ವಿವಿಧೆಡೆಗಳಿಂದ ಬೆಂಗಳೂರಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಮೃತರನ್ನು ಸಿಂಧನೂರು, ಲಿಂಗಸೂರು, ದೇವದುರ್ಗದ ನಿವಾಸಿಗಳು ಎಂದು ತಿಳಿದು ಬಂದಿದೆ. ಮೂವರು ಮಹಿಳೆಯರು, ನಾಲ್ಕು ಮಂದಿ ಪುರುಷರು ಮತ್ತು ಇಬ್ಬರು ಮಕ್ಕಳು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಶಿರಾ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿರಾ ತಾಲ್ಲೂಕಿನ ಚಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಗಾಯಗೊಂಡವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಂದೀಪ, ಬಾಲಾಜಿ, ಅನಿಲ್ ಎಂಬ ಮೂರು ಜನ ಮಕ್ಕಳು ಸೇರಿದಂತೆ ಒಟ್ಟು 12 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವದುರ್ಗ ತಾಲ್ಲೂಕಿನ ನಾಗಮ್ಮ (50) ಮತ್ತು ಉಮೇಶ್ (28) ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾನ್ವಿ, ಸಿರವರ ತಾಲ್ಲೂಕಿನವರು
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಲೆನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾನ ನಡೆದ ಅಪಘಾತದಲ್ಲಿ ಮೃತಪಟ್ಟವರು ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿರವರ ತಾಲ್ಲೂಕಿಗೆ ಸೇರಿದವರು. ಟೆಂಪೋ ಚಾಲಕ ಕೃಷ್ಣಪ್ಪ, ಸುಜಾತ, ಬಾಲಕ ವಿನೋದ, ಲಕ್ಷ್ಮೀ ಸಹಿತ ಮೃತರ ವಿವರ ಗೊತ್ತಾಗಿದೆ. ಉಳಿದವರ ವಿವರ ಖಚಿತವಾಗಿಲ್ಲ.
ದುರುಗಮ್ಮ, ಬಾಲರಾಜು, ಸಂದೀಪ್, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜು, ಮೌನಿಕ, ನಾಗಪ್ಪ, ನಾಗಮ್ಮ, ವಸಂತ್, ವೈಷ್ಣವಿ, ವೀರಭದ್ರ, ಲತಾ ಅಪಘಾತದಲ್ಲಿ ಗಾಯಗೊಂಡವರು.
ಟೆಂಪೊದಲ್ಲಿದ್ದ ಶಿವರಾಜು ಎಂಬುವವರು ಮಾತನಾಡಿ, 'ನಾನು ಡ್ರೈವರ್ ಪಕ್ಕ ಕೂತಿದ್ದೆ, ಟೆಂಟೊ ನಿಧಾನಕ್ಕೆ ಹೋಗಿತ್ತು, ಲಾರಿ ಡಿಕ್ಕಿ ಹೊಡೆದ ಮೇಲೆ ಟೆಂಪೊ ಪಲ್ಟಿ ಹೊಡೆದುಬಿಡ್ತು' ಎಂದಿದ್ದಾರೆ. ಇಪ್ಪತ್ತು ಜನರು ಟೆಂಪಪೊದಲ್ಲಿ ಇದ್ದರು. ಭರ್ತಿ ಆಗಿದ್ದರಿಂದ ಮೌಲ ಮತ್ತೆ ಇನ್ನಿಬ್ಬರು ಟೆಂಪೊ ಮೇಲೆ ಮಲಗಿದ್ದರು. ಟೆಂಪೊ ಮೇಲೆ ಮಲಗಿದ್ದವರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರಗ ಜ್ಞಾನೇಂದ್ರ ಸಂತಾಪ
ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದು, 'ಇದೊಂದು ಅತ್ಯಂತ ದುರಾದೃಷ್ಟಕರ ಘಟನೆ' ಎಂದಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳ ಮಾತನಾಡಿದ್ದು, ಗಾಯಾಳುಗಳಿಗೆ, ಸೂಕ್ತ ಚಿಕಿತ್ಸೆ ಒದಗಿಸಲು, ನಿರ್ದೇಶನ ನೀಡಲಾಗಿದೆ.
ಘಟನೆ ಬಗ್ಗೆ ಸಿಎಂ ಸಂತಾಪ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಹೆಚ್.ಡಿ ಕುಮಾರಸ್ವಾಮಿ ಸಂತಾಪ
'ತುಮಕೂರು ಜಿಲ್ಲೆಯ ಶಿರಾ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ದುರ್ಮರಣಕ್ಕಾಗಿ, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಮೃತಪಟ್ಟವರು ಕೂಲಿಕಾರ್ಮಿಕರು, ಬದಕು ಕಟ್ಟಿಕೊಳ್ಳಲು ಅವರೆಲ್ಲರೂ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದರೆಂದು ತಿಳಿದು ನನಗೆ ಅತೀವ ದುಃಖವಾಗಿದೆ. ತಕ್ಷಣವೇ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಖುದ್ದು ಕ್ರಮ ವಹಿಸಿ ಜೀವ ಕಳೆದುಕೊಂಡಿರುವವರ ಎಲ್ಲ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಗಾಯಾಳುಗಳಿಗೆ ಉಚಿತವಾಗಿ ಅತ್ಯುತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಒತ್ತಾಯಿಸುತ್ತೇನೆ. ಗಾಯಾಳುಗಳೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications