ತುಮಕೂರಿನಲ್ಲಿ ಭೀಕರ ಕಾರು ಅಪಘಾತ: ಆರು ಮಂದಿ ಸ್ಥಳದಲ್ಲೇ ಸಾವು
ತುಮಕೂರು, ಸೆಪ್ಟೆಂಬರ್ 09: ಗೌರಿ ಗಣೇಶ ಹಬ್ಬದ ಸಂಭ್ರಮ ಮುಗಿಸಿ ತಮ್ಮ ಸ್ವಗ್ರಾಮದಿಂದ ಬೆಂಗಳೂರಿಗೆ ಹೊರಟ ಕುಟುಂಬ ಭೀಕರ ಅಪಘಾತದಲ್ಲಿ ಮಾರ್ಗ ಮಧ್ಯದಲ್ಲೇ ಉಸಿರು ಚೆಲ್ಲಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಬಾಲಕಿ ಸೇರಿ ಆರು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ(60), ಸಿಂಧೂ (33), ವೇದಾಸ್ ರೆಡ್ಡಿ(12), ಆನಂದ್(30), ಕಾರೇನಹಳ್ಳಿ ಗ್ರಾಮದ ನಾಗರಾಜ್ (33), ಹಾಗೂ ಸಿದ್ದಗಂಗಾ(35) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರು ಊರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮುಗಿಸಿಕೊಂಡು ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕೆಎ-03 NB 2646 ಸಂಖ್ಯೆಯ ನೆಕ್ಸಾ ಮಾರುತಿ ಕಾರು ಹಾಗೂ ಕೆಎ-64 M 2627 ಸಂಖ್ಯೆಯ ಟಿಯಾಗೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 1 ವರ್ಷದ ಗಂಡು ಮಗು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಕ್ಕಿಯ ರಭಸಕ್ಕೆ ಎರಡು ಕಾರಗಳು ಸಂಪೂರ್ಣ ಜಖಂಗೊಂಡಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತ ಸ್ಥಳಕ್ಕೆ ತುಮಕೂರು ಎಸ್.ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications