ಅಕಟಕಟಾ! ಹೊನ್ನಾದೇವಿ ಬಲಗಡೆ ಹೂಪ್ರಸಾದ ನೀಡಿದರೂ ಕಾಂಗ್ರೆಸ್ ಗೆಲ್ಲಲಿಲ್ಲ
ತುಮಕೂರು, ನ 10: ಕರ್ನಾಟಕದ ಎರಡು ಅಸೆಂಬ್ಲಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಗೆ ನಿರೀಕ್ಷಿತ ಜಯವಾಗಿದ್ದರೂ, ಶಿರಾದಲ್ಲಿ ಈ ಮಾತು ಅನ್ವಯವಾಗುವುದಿಲ್ಲ ಎಂದೇ ಹೇಳಲಾಗುತ್ತಿತ್ತು.
ಆದರೆ, ಶಿರಾದಲ್ಲೂ ಬಿಜೆಪಿ 13ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ಮೂಲಕ, ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಲೆಕ್ಕಾಚಾರವನ್ನು ಉಲ್ಟಾಗೊಳಿಸಿದೆ. ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಿದ್ದಾರೆ.
ಜೆಡಿಎಸ್ ಇಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿರುವುದು ಒಂದೆಡೆಯಾದರೆ, ಅನುಕಂಪದ ರಾಜಕಾರಣ ವರ್ಕೌಟ್ ಆಗಿಲ್ಲ ಎನ್ನುವುದು ಇನ್ನೊಂದೆಡೆ. ಶಿರಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಏನಾಗಬಹುದು ಎಂದು ತುಮಕೂರು ಕಾಂಗ್ರೆಸ್ ಮುಖಂಡರು ದೇವರ ಮೊರೆ ಹೋಗಿದ್ದದ್ದು ಗೊತ್ತಿರುವ ವಿಚಾರ.

ತುಮಕೂರಿನ ಹೆಬ್ಬೂರು, ಹೊನ್ನಾದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲುತ್ತಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಹೂಪ್ರಸಾದವನ್ನಿಟ್ಟು ಪ್ರಾರ್ಥಿಸಿಕೊಂಡಿದ್ದರು.
ಜಯಚಂದ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದಾದರೆ ಬಲಗಡೆಯಿಂದ ಹೂಪ್ರಸಾದ ಕೊಡು ಎಂದು ಕಾಂಗ್ರೆಸ್ ಕಾರ್ಯಕರ್ತರು ತಾಯಿಯಲ್ಲಿ ಪ್ರಾರ್ಥಿಸಿಕೊಂಡಿದ್ದರು. ಆಗ ಕೆಲವೇ ಕ್ಷಣದಲ್ಲಿ ಬಲಗಡೆಯಿಂದ ಹೂವು ಬಿದ್ದಿತ್ತು. ಇದರಿಂದ, ಕಾಂಗ್ರೆಸ್ಸಿಗೇ ಜಯ ಎಂದು ಕಾರ್ಯಕರ್ತರು ನಂಬಿದ್ದರು. ಆದರೆ, ಉಲ್ಟಾ ಹೊಡೆದಿದೆ.
ಕ್ಷೇತ್ರದ ಮತಎಣಿಕೆಯ ಯಾವುದೇ ಸುತ್ತಿನಲ್ಲೂ, ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿರಲಿಲ್ಲ. ಪೋಸ್ಟಲ್ ವೋಟ್ ನಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದವು. 24 ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಅಂತರದಲ್ಲಿ ವ್ಯತ್ಯಾಸವಾಗುತ್ತಿತ್ತೋ ವಿನಃ ಯಾವ ರೌಂಡ್ ನಲ್ಲೂ ಟಿ.ಬಿ.ಜಯಚಂದ್ರ ಲೀಡ್ ಪಡೆದುಕೊಂಡಿರಲಿಲ್ಲ.
ಹಾಗಾಗಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಗೆಲ್ಲುತ್ತಾರೆಂದು ಬಲಗಡೆಯಿಂದ ಹೂಪ್ರಸಾದ ನೀಡಿದ್ದ ಹೊನ್ನಾದೇವಿಯ ಈ ಬಾರಿಯ ಮುನ್ಸೂಚನೆ, ಶಿರಾದಲ್ಲಿ ವರ್ಕೌಟ್ ಆಗಿಲ್ಲ.












Click it and Unblock the Notifications