ಸೋಲಾರ್ ಪಾರ್ಕ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಪಂಚ್ ಡೈಲಾಗ್
Recommended Video

ತಿರುಮಣಿ (ಪಾವಗಡ), ಮಾರ್ಚ್ 2: "ಇಲ್ಲಿ ಸೃಷ್ಟಿ ಆಗಿರುವುದು ಅದ್ಭುತ. ಜಗತ್ತಿನ ಎಂಟನೇ ಅದ್ಭುತ. ನೀವು ಈ ಕಾರಣಕ್ಕೆ ಸದಾ ಡಿ.ಕೆ.ಶಿವಕುಮಾರ್ ರನ್ನು ನೆನಪಿಸಿಕೊಳ್ಳಬೇಕು. ಈ ಸೋಲಾರ್ ಪಾರ್ಕ್ ನಿಂದ ಪಾವಗಡದ ಜನರ ಭಾಗ್ಯದ ಬಾಗಿಲು ತೆರೆದಿದಿದೆ" ಹೀಗೆ ಮಾತನಾಡಿ, ಚಪ್ಪಾಳೆ- ಶಿಳ್ಳೆ ಗಿಟ್ಟಿಸಿದರು ಮುಖ್ಯಮಂತ್ರಿ ಸಿದ್ದರಾಮಯ್ಯ.
ಪಾವಗಡ ತಾಲೂಕು ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ನ ಮೊದಲ ಹಂತದ ಉತ್ಪಾದನೆಯಾದ ಆರು ನೂರು ಮೆಗಾವಾಟ್ ಗೆ ಚಾಲನೆ ನೀಡಿದ ಅವರು, ತಮ್ಮ ಭಾಷಣದ ಉದ್ದಕ್ಕೂ ಪಂಚ್ ಡೈಲಾಗ್ ಗಳ ಮೂಲಕ ಗಮನ ಸೆಳೆದರು. ಈ ಸಂದರ್ಭದಲ್ಲಿ ರಾಜಕೀಯ ಮಾತನಾಡಲ್ಲ ಅಂತ ಹೇಳುತ್ತಲೇ ಅಮಿತ್ ಶಾ, ನರೇಂದ್ರ ಮೋದಿ, ಕುಮಾರಸ್ವಾಮಿ ಅವರಿಗೆ ಕಾಲೆಳೆದರು.
ಇಂಥ ಯೋಜನೆಗಳನ್ನು ಕೊಟ್ಟಿದ್ದು ನನ್ನ ಸರಕಾರ ಎಂದು ತೋರು ಬೆರಳನ್ನು ಎದೆಗೆ ಮೂರ್ನಾಲ್ಕು ಸಾರಿ ಒತ್ತಿ-ಒತ್ತಿ ಹೇಳಿದ ಅವರು, ಕನಕಪುರದಲ್ಲಿ ಮತ್ತೊಂದು ಕಾರ್ಯಕ್ರಮ ಇದೆ ಎಂದು ಹೆಲಿಕಾಪ್ಟರ್ ನಲ್ಲಿ ಹಾರಿಹೋದರು. ಇಡೀ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸಿದ್ದರಾಮಯ್ಯ ಅವರ ಆಯ್ದ ಪಂಚ್ ಡೈಲಾಗ್ ಗಳು ಇಲ್ಲಿವೆ.

ಭೂ ಸ್ವಾಧೀನ ಮಾಡಿಕೊಳ್ಳದೆ ಜಾರಿಗೆ ತಂದ ದೊಡ್ಡ ಯೋಜನೆ
ಇಂಥ ದೊಡ್ಡ ಯೋಜನೆಯೊಂದನ್ನು ಜಾರಿಗೆ ತಂದು, ಭೂ ಸ್ವಾಧೀನ ಮಾಡಿಕೊಳ್ಳದಿರುವುದು ಎಲ್ಲಾದರೂ ಇದೆಯಾ? ಆದರೆ ನಮ್ಮ ಸರಕಾರದಿಂದ ಅದು ಸಾಧ್ಯವಾಗಿದೆ. ಮಾಲೀಕತ್ವ ರೈತರ ಬಳಿಯೇ ಇದೆ. ಈ ಯೋಜನೆ ಬರುವುದು ಖಾತ್ರಿ ಆದ ಮೇಲೆ ಇಲ್ಲಿನ ಭೂಮಿ ಮೇಲಿನ ಬೆಲೆ ಹೆಚ್ಚಾಗಿದೆ. ಆದರೆ ಯಾವ ರೈತರೂ ಜಮೀನು ಮಾರಲು ಇಷ್ಟಪಡಲ್ಲ. ಏಕೆಂದರೆ ರೈತರಿಗೆ ಭೂಮಿ ಜತೆಗೆ ಅಂಥ ನಂಟಿರುತ್ತದೆ.

ಇಸ್ರೇಲ್ ತಂತ್ರಜ್ಞಾನ ತರ್ತೀರೋ..
ಅದೇನೋ ಇಸ್ರೇಲ್ ತಂತ್ರಜ್ಞಾನ ಜಾರಿಗೆ ತಂದರೆ ಬದಲಾವಣೆ ಆಗಿಬಿಡುತ್ತಂತೆ. ಪಾವಗಡ ಸುತ್ತಮುತ್ತ ಶೇಂಗಾ ಬೆಳೆಯುತ್ತಾರೆ. ಇಲ್ಲಿನವರಿಗೆ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಇಂಥವರಿಗಾಗಿ ಬಜೆಟ್ ನಲ್ಲಿ ಯೋಜನೆ ಮಾಡಿದ್ದೀವಿ. ಕೃಷಿ ಬೆಳಕು ಮೂಲಕ ನೆರವು ನೀಡುತ್ತಿದ್ದೀವಿ ಎಂದು ವೇದಿಕೆಯಲ್ಲಿದ್ದ ಜೆಡಿಎಸ್ ಶಾಸಕ ತಿಮ್ಮರಾಯಪ್ಪ ಅವರನ್ನು ಕುಮಾರಸ್ವಾಮಿ ಹೆಸರು ಹೇಳದೆ ಕಿಚಾಯಿಸಿದರು.

ಪುಕ್ಕಟೆ ಜಾಗ, ಶೇ ಐವತ್ತರಷ್ಟು ಹಣ ನಮ್ಮದು
ಮೊನ್ನೆ ಮೈಸೂರಿನಲ್ಲಿ ರೈಲ್ವೆ ಯೋಜನೆ ಉದ್ಘಾಟನೆಗೆ ಹೋಗಿದ್ದೆ. ಈ ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರ ಪುಕ್ಕಟೆ ಹಣ ಕೊಡುತ್ತದೆ. ಯೋಜನೆಯ ಒಟ್ಟು ಹಣದ ಶೇ ಐವತ್ತರಷ್ಟು ಹಣ ಕೊಡುತ್ತದೆ. ಆದರೂ ಕೇಂದ್ರದವರು ಇದು ನಮ್ಮ ಯೋಜನೆ ಅಂತಾರೆ. ನೀವಿದನ್ನು ಅರ್ಥ ಮಾಡಿಕೊಳ್ಳಬೇಕು.

ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೂರನೇ ಸ್ಥಾನ
ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಿಂದ ಆ ಹಣ ತೆಗೆದುಕೊಂಡು ಅದರಲ್ಲಿ ಅರ್ಧಕ್ಕಿಂತ ಕಡಿಮೆ ಹಣವನ್ನು ಕೇದ್ರದಿಂದ ವಾಪಸ್ ಕೊಟ್ಟಿದ್ದಾರೆ. ಈ ಬಗ್ಗೆ ಅಮಿತ್ ಶಾ ಪ್ರಶ್ನೆ ಮಾಡ್ತಾರೆ. ಅಲ್ಲ, ಅಮಿತ್ ಶಾಗಂತೂ ಸಂವಿಧಾನ ಗೊತ್ತಿಲ್ಲ. ಮಾತನಾಡುತ್ತಾರೆ. ಪ್ರಧಾನಿ ಮೋದಿ ಅವರೂ ಹಾಗೇ ಮಾತನಾಡ್ತಾರಲ್ರೀ!?

ಮುಂದಿನ ಸಲ ವಿರೋಧ ಪಕ್ಷದವರ ಮಾನ ಹರಾಜು ಹಾಕ್ತೀನಿ
ಸೋಲಾರ್ ಪಾರ್ಕ್ ಮೊದಲ ಹಂತದ ಉದ್ಘಾಟನೆಯ ಇಂದಿನ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಸಲ ಬಂದಾಗ ವಿರೋಧ ಪಕ್ಷಗಳ ಮಾನ ಹರಾಜು ಹಾಕ್ತೀನಿ ಎಂದು ಹೇಳಿದರು. ಈ ಮಾತಿಗೆ ಸಭೆಯಲ್ಲಿ ಸೇರಿದ್ದವರು ದೊಡ್ಡದಾಗಿ ನಕ್ಕರು.












Click it and Unblock the Notifications