ಮಹಿಳಾ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು?
ತುಮಕೂರು, ಫೆ. 16 : ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ತುಮಕೂರಿನಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳಾ ಸಮಾವೇಶವೊಂದರಲ್ಲಿ ಕಾಂಗ್ರೆಸ್ನ ಯುವರಾಜ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ವಿಶೇಷ.
ಭಾನುವಾರ ಮಧ್ಯಾಹ್ನ 12.45ಕ್ಕೆ ರಾಹುಲ್ ಗಾಂಧಿ ತುಮಕೂರಿನ ಮಹಾತ್ಮ ಗಾಂಧಿ ಮೈದಾನಕ್ಕೆ ಆಗಮಿಸಿದರು. ಮಹಿಳಾ ಸಮಾನಾಧಿಕಾರ ಸಮಾವೇಶವನ್ನು ಉದ್ಘಾಟಿಸಿದ ರಾಹುಲ್ ಗಾಂಧಿ ಜೊತೆಗೆ ಸಿಎಂ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ, ಸಂಸದೆ ರಮ್ಯಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಸಮಯ 1. 10 : ಉಮಾಶ್ರೀ ಭಾಷಣ : ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡುತ್ತಿದ್ದು, ಬಿಜೆಪಿ ಸರ್ಕಾರವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಸಚಿವ ಸಂಪುಟದ ಸದಸ್ಯರು ಮಹಿಳೆಯರಿಗೆ ಗೌರವ ನೀಡಿಲ್ಲ ಎಂದು ಉಮಾಶ್ರೀ ಆರೋಪಿಸಿದರು. [ಕುಂದಾನಗರಿಯಲ್ಲಿ ಯುವರಾಜನ ಘರ್ಜನೆ]
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರು ಚುಂಬನಾಚಾರ್ಯ ಎಂದು ಕುಟುಕಿದರು. ಮಾಜಿ ಸಚಿವ ಹಾಲಪ್ಪ ಅವರನ್ನು ರೇಪಿಸ್ಟ್ ಎಂದು ಜರಿದ ಉಮಾಶ್ರೀ, ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ ಬಿಜೆಪಿ ಸಚಿವರು ಮಹಿಳೆಯರಿಗೆ ಹೇಗೆ ಗೌರವ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಸಮಯ 1.15 : ಸಿಎಂ ಸಿದ್ದರಾಮಯ್ಯ ಭಾಷಣ : ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು. ಕೋಮುವಾದಿ ಬಿಜೆಪಿ ಅಧಿಕಾರ ಹಿಡಿಯಲು ಶತ ಪ್ರಯತ್ನ ನಡೆಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಸೂಕ್ತ ರಕ್ಷಣೆ ದೊರೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಭಾಷಣ : ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮಹಿಳೆಯರಿಗೆ ಎಲ್ಲಾ ಹಂತಗಳಲ್ಲೂ ಅಧಿಕಾರ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
* ಇದು ಮಹಿಳೆಯರ ಸಮಾವೇಶ, ಆದರೆ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಇದು ಪಕ್ಷದಲ್ಲೂ ಆಗುತ್ತಿದೆ. ಮಹಿಳೆಯರು ಚುನಾವಣಾ ಪ್ರಕ್ರಿಯೆಯಲ್ಲಿ ಮುಂದೆ ಬರಬೇಕು. ಮಹಿಳಾ ಸಬಲೀಕರಣಗೊಂಡ ರಾಜ್ಯಗಳು ಅಭಿವೃದ್ಧಿಯಲ್ಲಿ ವೇಗವಾಗಿ ಸಾಗುತ್ತಿವೆ ಎಂದರು. [ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ]
* ಭಾರತ ದೇಶ ಸೂಪರ್ ಪವರ್ ಆಗಬೇಕಾದರೆ, ಮಹಿಳಾ ಸಬಲೀಕರಣವಾಗಬೇಕು ಎಂದು ವಿಶ್ಲೇಷಿಸಿದ ರಾಹುಲ್ ಗಾಂಧಿ, ಮಹಿಳೆಯರನ್ನು ದಮನ ಮಾಡುವ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ಮಹಿಳೆಯರ ಅಗತ್ಯಗಳನ್ನು ಪರಿಗಣಿಸಿ ನಾವು ಸಬ್ಸಿಡಿ ಸಿಲಿಂಡರ್ ಗಳ ಮಿತಿಯನ್ನು 12ಕ್ಕೆ ಏರಿಕೆ ಮಾಡಿದ್ದೇವೆ ಎಂದು ಹೇಳಿದರು.
* ಮಹಿಳೆಯರಿಗೆ ಬಲ ತುಂಬಲು ಕಾಂಗ್ರೆಸ್ ಉದ್ಯೋಗಖಾತ್ರಿ, ಆರ್.ಟಿ.ಐ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ಇದೆ ವೇಳೆ ವಿಪಕ್ಷಗಳಿಗೆ ಮಹಿಳೆಯರ ಮೇಲೆ ಗೌರವವಿಲ್ಲ ರಾಹುಲ್ ವಾಗ್ದಾಳಿ ನಡೆಸಿದರು.
* ನಾನು ರಾಜಕೀಯ ಪ್ರವೇಶ ಮಾಡಿದ ನಂತರ ಮಹಿಳೆಯರ ಜೊತೆ ಕೆಲಸ ಮಾಡಿದೆ. ಆಗ ನನಗೆ ಮಹಿಳೆಯರನ್ನು ದಮನ ಮಾಡುವ ಪ್ರವೃತ್ತಿಯಿದೆ ಎಂಬುದು ತಿಳಿಯಿತು. ನಾನು ಯಾವುದೇ ಮಹಿಳೆಯ ಜೊತೆ ಮಾತನಾಡಿದಾಗಲೂ ಅವರನ್ನು ದಮನ ಮಾಡುವ ಪ್ರವೃತ್ತಿ ಗಮನಿಸಿದೆ. ಮನೆ, ಕೆಲಸದ ಸ್ಥಳ, ಬಸ್ ನಲ್ಲಿ, ರಸ್ತೆಗಳಲ್ಲಿ ಮಹಿಳೆ ದಮನ ಮಾಡುತ್ತಿದ್ದರು, ದಬ್ಬಾಳಿಕೆ ಮಾಡುತ್ತಿದ್ದದ್ದು ಗಮನಕ್ಕೆ ಬಂತು ಎಂದರು.
* ಮಹಿಳೆಯರಿಗೆ ಎಲ್ಲಾ ಪ್ರದೇಶದಗಳಲ್ಲಿ ಆದ್ಯತೆ ದೊರೆಯಬೇಕು ಎಂಬುದು ನನ್ನ ಆಸೆಯಾಗಿದೆ. ವಿಪಕ್ಷಗಳು ಮಹಿಳೆಯರಿಗೆ ಗೌರವ ಕೊಡುತ್ತಿಲ್ಲ. ಪಕ್ಷ ಸಂಘಟನೆ ಮತ್ತು ಇತರ ಹಂತಗಳಲ್ಲಿ ಮಹಿಳೆಯರಿಗೆ ಯಾವುದೇ ಅವಕಾಶ ನೀಡುತ್ತಿಲ್ಲ.
* ಮಹಿಳೆಯರು ರಾಜಕೀಯಕ್ಕೆ ಬನ್ನಿ, ಜೊತೆಯಲ್ಲಿ ದೇಶವನ್ನು ಬದಲಾಯಿಸೋಣ ಎಂದು ಕರೆ ನೀಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತದೆ. ಸಂಸತ್ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚು ಸ್ಥಾನ ಗಳಿಸಬೇಕು ಎಂದು ಹೇಳಿದರು.
* ಸಮಾವೇಶದಲ್ಲಿ ಭಾಗವಹಿಸಲು ಬಹಳ ದೂರದಿಂದ ನೀವು ಬಂದಿದ್ದೀರಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಮಾತು ಮುಗಿಸಿದರು.












Click it and Unblock the Notifications