Get Updates
Get notified of breaking news, exclusive insights, and must-see stories!

ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ಪ್ರಸಿದ್ಧಿ ಪಡೆದಿದ್ದು ಹೇಗೆ?

ತುಮಕೂರು, ಮಾ.10 : ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಕೊರಟಗೆರೆ ತಾಲೂಕಿನ ಸಣ್ಣ ಗ್ರಾಮವಾಗಿರುವ ಗೊರವನಹಳ್ಳಿ ದೇವಾಲಯದಿಂದಾಗಿಯೇ ಚಿರಪರಿಚಿತವಾಗಿದೆ. ಲಕ್ಷಾಂತರ ಭಕ್ತರಿರುವ ದೇವಾಲಯದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ದೇವಾಲಯದ ಇತಿಹಾಸ ಹೇಳುವಂತೆ ಬಡವರಾಗಿದ್ದ ಅಬ್ಬಯ್ಯ ಎಂಬುವವರು ಮೊದಲು ಶ್ರೀ ಮಹಾಲಕ್ಷ್ಮೀ ದೇವಿಯ ವಿಗ್ರಹವನ್ನು ಪಡೆದು ಪೂಜೆ ಮಾಡಲು ಆರಂಭಿಸಿದರು. ಮಹಾಲಕ್ಷ್ಮೀ ಪೂಜೆ ಮಾಡಿದ ನಂತರ ಅಬ್ಬಯ್ಯ ಶ್ರೀಮಂತರಾದರು ಮತ್ತು ಸಮಾಜ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರು. ಆದ್ದರಿಂದ, ಅವರ ಮನೆ 'ಲಕ್ಷ್ಮೀ ನಿವಾಸ' ಎಂದು ಪ್ರಸಿದ್ಧವಾಯಿತು.[ಗೊರವನಹಳ್ಳಿ ದೇವಾಲಯ ಜಿಲ್ಲಾಡಳಿತದ ವಶಕ್ಕೆ]

ಕನಸಿನಲ್ಲಿ ಬಂದ ಮಹಾಲಕ್ಷ್ಮೀ : ಅಬ್ಬಯ್ಯ ಅವರ ಸಹೋದರರಾದ ತೋಟದಪ್ಪ ಅವರು ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದರು. ಅಬ್ಬಯ್ಯ ಮರಣಾನಂತರ ತೋಟದಪ್ಪ ಅವರು ಶ್ರೀ ಮಹಾಲಕ್ಷ್ಮೀ ದೇವಿಯ ಪೂಜೆಯನ್ನು ಮುಂದುವರೆಸಿದರು. ತೋಟದಪ್ಪ ಅವರ ಕನಸಿನಲ್ಲಿ ಬಂದ ಮಹಾಲಕ್ಷ್ಮೀ ತನಗಾಗಿ ಒಂದು ಗುಡಿಯನ್ನು ನಿರ್ಮಿಸುವಂತೆ ಅವರಿಗೆ ಹೇಳಿದಳಂತೆ ಎಂಬುದು ಇತಿಹಾಸ.

Goravanahalli

ದೇವಾಲಯ ನಿರ್ಲಕ್ಷ್ಯಕ್ಕೆ : ತೋಟದಪ್ಪ ಅವರು ಕಾಲವಾದ ನಂತರ ಚೌಡಯ್ಯ ಎಂಬುವವರು ಪೂಜೆಗಳನ್ನು ಮಾಡುತ್ತಿದ್ದರು. ಆದರೆ, 1910ರ ನಂತರ ದೇವಾಲಯವನ್ನು ನಿರ್ಲಕ್ಷಿಸಲಾಯಿತು. 1925ರಲ್ಲಿ ಗೊರವನಹಳ್ಳಿಗೆ ಆಗಮಿಸಿದ ಕಮಲಮ್ಮ ಎಂಬುವವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇವಾಲಯವನ್ನು ನೋಡಿ, ಪುನಃ ಪೂಜೆಗಳನ್ನು ಆರಂಭಿಸಿದರು.

ಕಮಲಮ್ಮ ಅವರು ಕೆಲವು ಕಾಲ ಗೊರವನಹಳ್ಳಿ ಬಿಟ್ಟು ಹೋದ ನಂತರ ದೇವಾಲಯ ಪುನಃ ನಿರ್ಲಕ್ಷ್ಯಕ್ಕೆ ಒಳಗಾಯಿತು. 1952ರಲ್ಲಿ ಪುನಃ ಗೊರವನಹಳ್ಳಿಗೆ ಬಂದ ಕಮಲಮ್ಮ ಅವರು ಮತ್ತೆ ಪೂಜೆ ಆರಂಭಿಸಿದರು ಮತ್ತು ಗ್ರಾಮದಲ್ಲಿಯೇ ಉಳಿದು ನಿತ್ಯ ಮಹಾಲಕ್ಷ್ಮೀಯನ್ನು ಪೂಜಿಸತೊಡಗಿದರು. [ದೇವಾಲಯದ ಆಸ್ತಿ 16 ಕೋಟಿಗೂ ಹೆಚ್ಚು]

ಕಮಲಮ್ಮ ಅವರು ಪ್ರತಿದಿನ ಪೂಜೆ ಆರಂಭಿಸಿದ ನಂತರ, ಸ್ಥಳೀಯ ಜನರು ದೇವಾಲಯದ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿದರು ಮತ್ತು ದೇವಿಯ ದರ್ಶನಕ್ಕಾಗಿ ಆಗಮಿಸ ತೊಡಗಿದರು. ಹೀಗೆ ಜನರ ಬಾಯಿಯಿಂದ ಬಾಯಿಗೆ ಮಹಾಲಕ್ಷ್ಮೀ ದೇವಿಯ ಮಹಾತ್ಮೆ ಹಬ್ಬಿತು. ಸದ್ಯ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

Goravanahalli Mahalakshmi temple

ಮೂರು ದಿನ ವಿಶೇಷ ಪೂಜೆ : ಮಹಾಲಕ್ಷ್ಮೀ ದೇವಾಲಯದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ. ಕಾರ್ತಿಕಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಲಕ್ಷಾಂತರ ಭಕ್ತರು ಈ ಸಮಯದಲ್ಲಿ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. [ಮಾಹಿತಿ ದೇವಾಲಯದ ವೆಬ್ ಸೈಟ್]

ಹಸಿರು ವಾತಾವರಣದಿಂದ ಸುತ್ತುವರೆದಿರುವ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮೀ ದೇವಾಲಯದ ಜೊತೆಗೆ ಮಾರಿಕಾಂಬಾ, ಮಂಚಾಲ ನಾಗಪ್ಪ ದೇವಾಲಯಗಳೂ ಇವೆ. ದೇವಾಲಯದ ಸಮೀಪದಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚಿಕ್ಕ ಜಲಾಶಯವನ್ನು ನಿರ್ಮಿಸಲಾಗಿದೆ. ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಈ ದೇವಾಲಯಕ್ಕೆ ಆಗಮಿಸುತ್ತಾರೆ.

ವಿವಾದವೇನು : ಸದ್ಯ, 14 ಮಂದಿ ಧರ್ಮದರ್ಶಿಗಳನ್ನು ಒಳಗೊಂಡ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ಟ್ರಸ್ಟ್‌ನಲ್ಲಿ ಸ್ಥಳೀಯರು ಕಡಿಮೆ ಇದ್ದು, ಬೆಂಗಳೂರು ಮತ್ತು ತುಮಕೂರಿನ ವ್ಯಕ್ತಿಗಳು ಧರ್ಮದರ್ಶಿಗಳಾಗಿದ್ದರು.

ಸ್ಥಳೀಯರು ಕಟ್ಟಿ ಬೆಳೆಸಿದ ದೇವಾಲಯವನ್ನು ಪ್ರಭಾವಿ ಮಠವೊಂದಕ್ಕೆ ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಸ್ಥಳೀಯರು ಮತ್ತು ಟ್ರಸ್ಟ್ ನಡುವೆ ಈ ವಿಚಾರದಲ್ಲಿ ಗಲಾಟೆಗಳು ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಟ್ರಸ್ಟ್‌ ವಿರುದ್ಧ ಅವ್ಯವಹಾರದ ಆರೋಪಗಳೂ ಕೇಳಿ ಬಂದಿದ್ದವು. ಆದ್ದರಿಂದ ತಿಂಗಳ ಹಿಂದೆ ದೇವಾಲಯದ ಆಡಳಿತ ಕಚೇರಿಗೆ ಸ್ಥಳೀಯ ಗ್ರಾಮಸ್ಥರು ಬೀಗ ಹಾಕಿದ್ದರು.

ಈ ಎಲ್ಲಾ ವಿವಾದಗಳ ಹಿನ್ನಲೆಯಲ್ಲಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ಮಧುಗಿರಿ ಉಪವಿಭಾಗಾಧಿಕಾರಿ ಅನಿತಾ ಲಕ್ಷ್ಮೀ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತುಮಕೂರು ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+