ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಕೆ. ಎನ್. ರಾಜಣ್ಣ
ತುಮಕೂರು, ಜುಲೈ 21 : ಕಾಂಗ್ರೆಸ್ ನಾಯಕ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ. ಎನ್. ರಾಜಣ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. 2018ರ ಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದರು.
ಭಾನುವಾರ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ. ಎನ್. ರಾಜಣ್ಣ, " ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ" ಎಂದು ಘೋಷಣೆ ಮಾಡಿದರು.
"ಮುಂದೆ ಮಧುಗಿರಿ ಕ್ಷೇತ್ರದಲ್ಲಿ ಯಾರೇ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಲು ಮುಂದೆ ಬಂದರೆ ನಾನು ಬೆಂಬಲಿಸುತ್ತೇನೆ. ನಾನಂತೂ ಸ್ಪರ್ಧೆ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಕೆ. ಎನ್. ರಾಜಣ್ಣ 69, 947 ಮತಗಳನ್ನು ಪಡೆದು ಸೋಲು ಕಂಡಿದ್ದರು. ಅವರ ಎದುರಾಳಿಯಾಗಿದ್ದ ಜೆಡಿಎಸ್ನ ಎಂ.ವಿ.ವೀರಭದ್ರಯ್ಯ 88,521 ಮತಪಡೆದು ಜಯಗಳಿಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ ಕೆ. ಎನ್. ರಾಜಣ್ಣ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆದರೆ, ಶನಿವಾರ ಸರ್ಕಾರ ಬ್ಯಾಂಕ್ ಸೂಪರ್ ಸೀಡ್ ಮಾಡಲು ಆದೇಶ ನೀಡಿತ್ತು.
ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಹಿಂದೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಡಾ. ಜಿ. ಪರಮೇಶ್ವರ ರಾಜಕೀಯ ದ್ವೇಷ ಅಡಗಿದೆ ಎಂದು ಕೆ. ಎನ್. ರಾಜಣ್ಣ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪರಮೇಶ್ವರ, 'ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರ ನನಗೆ ಗೊತ್ತಿಲ್ಲ. ನನ್ನ ಇಲಾಖೆ ಅದು ಅಲ್ಲ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.ಯಾವ ಕಾರಣಕ್ಕೆ ಸೂಪರ್ ಸೀಡ್ ಮಾಡಿದಾರೆ ಎಂದು ಗೊತ್ತಿಲ್ಲ". ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications