ಸಿಎಂ ಕುರ್ಚಿಗಾಗಿ ನಾನೇನು ಟವಲ್ ಹಾಕಿಲ್ಲ, ಜನಾದೇಶಕ್ಕೆ ಬದ್ಧ: ಸಿದ್ದರಾಮಯ್ಯ
ತುಮಕೂರು, ಜುಲೈ 21: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂಬ ವಿಚಾರಕ್ಕೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ," ನಾನು ಮುಖ್ಯಮಂತ್ರಿ ಕುರ್ಚಿಗೆ ಟವಲ್ ಹಾಕಿಕೊಂಡು ಕುಳಿತಿಲ್ಲ, ರಾಜ್ಯದ ಜನರು ನೀಡುವ ತೀರ್ಪಿಗೆ ನಾವೆಲ್ಲರೂ ಬದ್ಧವಾಗಿದ್ದೇವೆ" ಎಂದು ತಿಳಿಸಿದ್ದಾರೆ.
ಶಿರಾ ನಗರದ ಗ್ರಾಮ ದೇವತೆ ದುರ್ಗಮ್ಮ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುರ್ಚಿಗೆ ಕಾಂಗ್ರೆಸ್ನಲ್ಲಿ ಮಾತ್ರ ಸ್ಪರ್ಧೆ ನಡೆಯುತ್ತಿಲ್ಲ, ಬಿಜೆಪಿ ಪಕ್ಷದಲ್ಲಿ ಸಹಾ ಹೋರಾಟ ನಡೆಯುತ್ತಿದೆ. ಎಲ್ಲಾ ಪಕ್ಷಗಳಲ್ಲೂ ಸ್ಪರ್ಧೆ ಸಾಮಾನ್ಯವಾಗಿರುತ್ತದೆ. ಚುನವಾಣೆಯಲ್ಲಿ ಜನತೆ ನೀಡುವ ತೀರ್ಪಿಗೆ ಬದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕ್ಲಿನ್ ಚಿಟ್ ಪಡೆದ ಬಗ್ಗೆ ಮಾತನಾಡಿ, ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಈಶ್ವರಪ್ಪಗೆ ಕ್ಲಿನ್ ಚಿಟ್ ನೀಡಬಹುದೆಂಬ ಸಂದೇಶ ಮೊದಲೇ ಇತ್ತು. ಆದರೆ ಸಂತೋಷ್ ಸ್ವತಃ ಡೆತ್ ನೋಟ್ನಲ್ಲಿ ಈಶ್ವರಪ್ಪ ತಮ್ಮ ಸಾವಿಗೆ ಕಾರಣವೆಂದೂ ಹೇಳಿಕೊಂಡಿದ್ದರೂ, ಸಹಾ ಸೂಕ್ತವಾಗಿ ತನಿಖೆ ನಡೆಸದೇ ಕ್ಲಿನ್ ಚಿಟ್ ನೀಡಿ ಕುಟುಂಬಸ್ಥರಿಗೆ ಮತ್ತಷ್ಟು ನೋವು ನೀಡಲಾಗಿದೆ. ಪ್ರಕರಣದ ಸತ್ಯಾ ಸತ್ಯತೆ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ಹುಟ್ಟುಹಬ್ಬ ಆಚರಣೆ ಅಧಿಕ್ಕಾರಕ್ಕಾಗಿ ಅಲ್ಲ
ಇನ್ನು 75 ನೇ ಜನ್ಮದಿನಾಚರಣೆಯನ್ನು ದೊಡ್ಡದಾಗಿ ಅಚರಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ " ನಾನು ಇಲ್ಲಿಯವರೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ, ಆದರೆ ಈ ಬಾರಿ 75 ವರ್ಷವಾಗಿರುವ ಕಾರಣ ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದೇನೆ. ಆದರೆ ಇಂತಹ ಕಾರ್ಯಕ್ರಮದ ಮೂಲಕ ಅಧಿಕಾರ ಪಡೆಯಬೇಕು ಎಂಬ ಆಸೆ ನನಗಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಎಂದು ಹರ್ಷೋದ್ಗಾರ
ಶಿರಾ ಪಟ್ಟಣದ ಶ್ರೀ ದುರ್ಗಮ್ಮ ದೇವಿ ನೂತನ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹೂವಿನ ಸುರಿಮಳೆಗೈದರು. ಅಲ್ಲದೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

ದಾವಣಗೆರೆ ಪ್ರತಿಭಟನೆಯಲ್ಲಿ ಸಿದ್ದು ಭಾಗಿ
ಸೋನಿಯಾ ಗಾಂಧಿಗೆ ಇ.ಡಿ ನೋಟಿಸ್ ನೀಡಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನೆಗೆ ಭಾಗವಹಿಸುತ್ತಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಜೊತೆಗೂಡಿ ದಾವಣಗೆರೆಗೆ ತೆರಳಿದ್ದಾರೆ. ನಗರದ ಅಂಬೇಡ್ಕರ್ ಸರ್ಕಲ್ನಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಲಿದ್ದಾರೆ.

ಬಾದಾಮಿಯಿಂದ ಬಾಗಲಕೋಟೆಗೆ ಪಾದಯಾತ್ರೆ
ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಬಾದಾಮಿಯಿಂದ ಬಾಗಲಕೋಟೆವರೆಗೆ ಆಗಸ್ಟ್ 9,10, ರಂದು ಸಿದ್ದರಾಮಯ್ಯ ಪಾದಯಾತ್ರೆ ಮಾಡಲಿದ್ದಾರೆ. ತಮಗೆ ರಾಜಕೀಯದಲ್ಲಿ ಕೈ ಹಿಡಿದ ಬಾದಾಮಿಯಲ್ಲಿ, ತಮ್ಮ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.












Click it and Unblock the Notifications