ದೇವೇಗೌಡರು ಸ್ಪರ್ಧೆ ಮಾಡಿದರೆ ಹೆದರುವುದಕ್ಕೆ ನಾನು ಸೀರೆ ಉಟ್ಟಿಲ್ಲ: ಜಿಎಸ್ ಬಿ
Recommended Video
ತುಮಕೂರು, ಮಾರ್ಚ್ 15: "ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಗೆ ನಾನೂ ಆಕಾಂಕ್ಷಿ. ದೇವೇಗೌಡರಲ್ಲ ಯಾರಾದರೂ ಸ್ಪರ್ಧೆ ಮಾಡಲಿ, ಹೆದರುವ ಪ್ರಶ್ನೆಯೇ ಇಲ್ಲ. ನಾವೇನೂ ಸೀರೆ ಉಟ್ಟುಕೊಂಡು ಕೂತಿಲ್ಲ. ನಮಗೂ ಕಾರ್ಯಕರ್ತರ ಬೆಂಬಲ ಇದೆ" ಎಂದು ತುಸು ಖಾರವಾಗಿಯೇ ಉತ್ತರ ನೀಡಿದರು ಮಾಜಿ ಸಂಸದರಾದ ಜಿ.ಎಸ್.ಬಸವರಾಜ್.
ಈ ಸಲ ತುಮಕೂರಿನಿಂದ ಜೆಡಿಎಸ್ ಗೆ ದೇವೇಗೌಡರು ಅಭ್ಯರ್ಥಿಯಾದರೆ ಎಪ್ಪತ್ತೇಳು ವರ್ಷದ ಬಸವರಾಜ್ ತಾವು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ ಎಂದಿರುವುದಾಗಿ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಲು ಒನ್ ಇಂಡಿಯಾ ಕನ್ನಡದಿಂದ ಅವರನ್ನು ಸಂಪರ್ಕಿಸಿದಾಗ, ಮೂವತ್ತೈದು ವರ್ಷದ ಹಿಂದೆಯೇ ಸಂಸದನಾದವನು ನಾನು. ಲೋಕಸಭೆಗೆ ದೇವೇಗೌಡರಿಗಿಂತ ನಾನು ಹಿರಿಯ ಎಂದರು.
ಸೀಟು ಹಂಚಿಕೆಯಲ್ಲೂ ಪರಂಗೆ ಧರ್ಮ ಸಂಕಟ; ಗೆದ್ದು ಬೀಗಿದ ಸಿದ್ದು
ದೇವೇಗೌಡರು ಸ್ಪರ್ಧೆ ಮಾಡಿದರೆ ಮಾಡಲಿ. ಅದಕ್ಕೆ ನಾನು ಯಾಕೆ ಹೆದರಲಿ? ಇದೇ ತಿಂಗಳ ಹದಿನೆಂಟನೇ ತಾರೀಕು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಟ್ಟಿ ಘೋಷಣೆ ಆಗಲಿದೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ ಹಾಗೂ ನಾನು ಸ್ಪರ್ಧೆ ಮಾಡುತ್ತೇನೆ ಎಂದು ದೃಢವಾದ ಧ್ವನಿಯಲ್ಲಿ ಹೇಳಿದರು.
ಸೊಗಡು ಶಿವಣ್ಣ ಕೂಡ ಟಿಕೆಟ್ ಆಕಾಂಕ್ಷಿ
ತುಮಕೂರು ಬಿಜೆಪಿಯಲ್ಲಿ ಸೊಗಡು ಶಿವಣ್ಣ ಬಣ ಹಾಗೂ ಜಿ.ಎಸ್.ಬಸವರಾಜ್ ಬಣ ಎಂದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ್ ಅವರ ಮಗ ಜ್ಯೋತಿಗಣೇಶ್ ಗೆ ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆತು, ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಇನ್ನು ಸೊಗಡು ಶಿವಣ್ಣ ಕೂಡ ತಾವು ಲೋಕಸಭಾ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ನ ಎಸ್.ಪಿ.ಮುದ್ದಹನುಮೇಗೌಡ ಸಂಸದರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಜಿ.ಎಸ್.ಬಸವರಾಜ್ ವಿರುದ್ಧ ಜಯಿಸಿದ್ದರು. ಈ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಈ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಲ್ಲಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಇದೆ.
ದೇವೇಗೌಡರು ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ
ಈ ಮಧ್ಯೆ ಹಾಲಿ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದಕ್ಕೆ ತುಮಕೂರು ಜಿಲ್ಲಾ ಕಾಂಗ್ರೆಸ್ ಸೇರಿದಂತೆ ರಾಜ್ಯದ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ. ಆದರೆ ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡರು, ದೇವೇಗೌಡರು ಇಲ್ಲಿಂದ ಸ್ಪರ್ಧೆ ಮಾಡುವುದಾದರೆ ನಮ್ಮದೇನೂ ಆಕ್ಷೇಪವಿಲ್ಲ ಎಂದಿದ್ದಾರೆ.
ಹಾಲಿ ಸಂಸದರಿರುವ ಕ್ಷೇತ್ರ ಬಿಡುವುದಿಲ್ಲ ಎಂದಿತ್ತು ಕಾಂಗ್ರೆಸ್
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿ, ಕಾಂಗ್ರೆಸ್ ಗೆ ಇಪ್ಪತ್ತು ಹಾಗೂ ಜೆಡಿಎಸ್ ಗೆ ಎಂಟು ಸ್ಥಾನ ಎಂದು ಒಪ್ಪಂದವಾಗಿದೆ. ಆದರೆ ಮೊದಲಿಗೆ ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಮಾತಾಗಿತ್ತು. ಆದರೆ ತುಮಕೂರು ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸಂಸದರೇ ಇದ್ದರೂ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ.