ಉಪ ಚುನಾವಣೆಗೆ ಡಿ. ಕೆ. ರವಿ ಪತ್ನಿ ಸ್ಪರ್ಧೆ; ಗೌರಮ್ಮ ಆಕ್ರೋಶ
ಬೆಂಗಳೂರು, ಅಕ್ಟೋಬರ್ 02: ಐಎಎಸ್ ಅಧಿಕಾರಿಯಾಗಿದ್ದ ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಉಪ ಚುನಾವಣೆ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಡಿ. ಕೆ. ರವಿ ತಾಯಿ ಗೌರಮ್ಮ ಕುಸುಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಗನ ಹೆಸರು ಬಳಕೆ ಮಾಡಬಾರದು ಎಂದು ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಗೌರಮ್ಮ ಹೆಚ್. ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ನಾವು ಕಷ್ಟದಲ್ಲಿದ್ದಾಗ ನನ್ನ ಮಗನ ದುಡ್ಡಲ್ಲಿ ಒಂದು ಪೈಸೆನೂ ಕೊಡಲಿಲ್ಲ" ಎಂದು ಆರೋಪಿಸಿದರು.
"ಈಗ ನನ್ನ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ನಿಲ್ಲುತ್ತಿದ್ದಾಳೆ. ಆಕೆ ಏನಾದರೂ ಮಾಡಲಿ ನನ್ನ ಮಗನ ಹೆಸರನ್ನು ಬಳಕೆ ಮಾಡಿಕೊಂಡು ಚುನಾವಣೆ ಪ್ರಚಾರ ಮಾಡುವುದು ಬೇಡ" ಎಂದು ಗೌರಮ್ಮ ಹೇಳಿದರು.
ಡಿ. ಕೆ. ರವಿ ಪತ್ನಿ ಕುಸುಮಾ ಅಥವ ಮಾವ ಹನುಮಂತರಾಯಪ್ಪ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.

ಒಂದು ಕಡ್ಡಿ, ಕರ್ಪೂರ ಹಚ್ಚಲಿಲ್ಲ
"ನನ್ನಗಂಡ ಅಂತ ಒಂದು ಕಡ್ಡಿ ಕರ್ಪೂರ ಹಚ್ಚಲಿಲ್ಲ. ನನ್ನ ಮಗನ ಜೊತೆಯಲ್ಲಿಯೇ ಅವಳು ಹೋಗಿ ಬಿಟ್ಟಳು ಅಂತ ನಾನು ತಿಳಿದುಕೊಂಡಿದ್ದೇನೆ. ನನ್ನ ಮಗನಿಗೆ ಬಂದ ದುಡ್ಡಲ್ಲಿ ಒಂದು ರೂಪಾಯಿನೂ ನಮ್ಮ ಕಷ್ಟ ಸುಖಕ್ಕೆ ಕೊಡಲಿಲ್ಲ" ಎಂದು ಡಿ. ಕೆ. ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗನ ಹೆಸರು ಏಕೆ ಎತ್ತಿಕೊಳ್ಳಬೇಕು
"ಅವಳು ಏಕೆ ನನ್ನ ಮಗನ ಹೆಸರು ಎತ್ತಿಕೊಂಡು ಚುನಾವಣೆಗೆ ನಿಲ್ಲಬೇಕು?. ನನ್ನ ಮಗನ ಹೆಸರು ಹೇಳಲು ಅವಳು ಯಾರು?. ಅಂದು ಮಣ್ಣಿಗೆ ಹಾಕಿ ಹೋದವಳು ಇಲ್ಲಿಯ ತನಕ ಬಂದಿಲ್ಲ. ಡಿ. ಕೆ. ರವಿ ಹೆಂಡತಿ ಅನ್ನುವ ಯೋಗ್ಯತೆ ಅವಳು ಕಳೆದುಕೊಂಡಿದ್ದಾಳೆ" ಎಂದು ಗೌರಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ಗಳಿಗೆ ಬೆಂಕಿ ಹಚ್ಚುವೆ
"ಅವಳು ಚುನಾವಣೆಗೆ ಆದರೂ ನಿಲ್ಲಲಿ, ಏನಾದರೂ ಮಾಡಲಿ ನನ್ನ ಮಗನ ಹೆಸರು, ಫೋಟೋ ಹಾಕಕೂಡದು. ಚುನಾವಣಾ ಪ್ರಚಾರದಲ್ಲಿ ಮಗನ ಫೋಟೋ ಬಳಸಿದರೆ ಬ್ಯಾನರ್, ಪಾಂಪ್ಲೆಟ್ಗಳಿಗೆ ಬೆಂಕಿ ಹಚ್ಚುತ್ತೇನೆ" ಎಂದು ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಠಕ್ಕೆ ಭೇಟಿ
ಹೆಚ್. ಕುಸುಮಾ ತಂದೆ ಹನುಮಂತರಾಯಪ್ಪ ಜೊತೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಗುರುವಾರ ಭೇಟಿ ನೀಡಿದ್ದರು. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ಆದರೆ, ಅವರು ಆರ್. ಆರ್. ನಗರ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ.












Click it and Unblock the Notifications