ಗೌಡ್ರು ಸೋಲಲು ನಿಖಿಲ್ ಕಾರಣ: ಕೆ ಎನ್ ರಾಜಣ್ಣ ಸ್ಫೋಟಕ ಹೇಳಿಕೆ
Recommended Video
ಸೋಲಿಗೊಂದು ನೆಪನೋ ಅಥವಾ ಅದೇ ವಸ್ತು ಸ್ಥಿತಿಯೋ? ಒಟ್ಟಿನಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ತನ್ನ ಕೋಟೆಯನ್ನು ಕರ್ನಾಟಕದಲ್ಲಿ ಭದ್ರಗೊಳಿಸಬೇಕು ಎನ್ನುವ ಜೆಡಿಎಸ್ ಕನಸು ಲೋಕಸಭಾ ಚುನಾವಣೆಯ ನಂತರ ನುಚ್ಚುನೂರಾಗಿದೆ.
ಖುದ್ದು ಜೆಡಿಎಸ್ ವರಿಷ್ಠರೇ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ವಿರುದ್ದ 13,339 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಸವರಾಜುಗೆ 596,127, ದೇವೇಗೌಡರಿಗೆ 582,788 ಮತಗಳ ಬಿದ್ದಿವೆ.
ತುಮಕೂರು ಲೋಕಸಭಾ ವ್ಯಾಪ್ತಿಯ ಅಸೆಂಬ್ಲಿವಾರು ಲೆಕ್ಕಾಚಾರದಲ್ಲಿ ದೇವೇಗೌಡರಿಗೆ ಕೈಕೊಟ್ಟಿದ್ದು ಮಧುಗಿರಿ. ಅಲ್ಲಿ ಹಾಲೀ ಶಾಸಕ ವೀರಭದ್ರಯ್ಯ ಜೆಡಿಎಸ್ ನವರಾಗಿದ್ದರೂ, ಜಿ ಎಸ್ ಬಸವರಾಜ್ ಅವರಿಗೆ ಅತಿಹೆಚ್ಚು ಲೀಡ್ ಸಿಕ್ಕಿದ್ದು ಅಲ್ಲಿಂದಲೇ.
ಮಧುಗಿರಿಯಲ್ಲಿ ಬಿಜೆಪಿಯ ಬೂತ್ ಕೂಡಾ ಇರಲಿಲ್ಲ, ಆದರೂ ಹತ್ತು ಸಾವಿರ ಗೌಡ್ರಿಗಿಂತ ಜಾಸ್ತಿ ಲೀಡ್ ಬಸವರಾಜ್ ಅವರಿಗೆ ಬಂದಿದೆ ಅಂದರೆ, ಅದು ಕುಟುಂಬ ರಾಜಕಾರಣದ ಮೇಲಿರುವ ಸಿಟ್ಟು ಎಂದಿರುವ ಮಾಜಿ ಮಧುಗಿರಿ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ, ಗೌಡ್ರ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಾರಣ ಎಂದಿದ್ದಾರೆ.

ಮುದ್ದಹನುಮೇಗೌಡರಿಗೆ ದೇವೇಗೌಡರಿಂದ ಟಿಕೆಟ್ ತಪ್ಪಿತು
ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಮುದ್ದಹನುಮೇಗೌಡರಿಗೆ ದೇವೇಗೌಡರಿಂದ ಟಿಕೆಟ್ ತಪ್ಪಿತು. ಅವರೇನೂ ಒಕ್ಕಲಿಗರಲ್ಲವೇ, ದೇವೇಗೌಡ್ರು ಮಾತ್ರ ಒಕ್ಕಲಿಗರಾ ಎಂದು ಖಾರವಾಗಿ ಪ್ರಶ್ನಿಸಿದ ಕೆ ಎನ್ ರಾಜಣ್ಣ, ಅವರ ವಿರುದ್ದ ನಾವೇನು ಪ್ರಚಾರವನ್ನೂ ಮಾಡಲಿಲ್ಲ, ಅವರ ಪರವಾಗಿ ಕ್ಯಾಂಪೇನಿಗೂ ಹೋಗಿಲ್ಲ. ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯಿಂದಾಗಿ, ಮಧುಗಿರಿಯಲ್ಲಿ ಜೆಡಿಎಸ್ಸಿಗೆ ಹಿನ್ನಡೆಯಾಯಿತು ಎಂದು ರಾಜಣ್ಣ ಹೇಳಿದ್ದಾರೆ.

ನಮ್ಮದೇ ಪಕ್ಷದ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಇದ್ದಿರಬಹುದು
ನಾನೂ ಒಬ್ಬ ರಾಜಕಾರಣಿ, ನಮ್ಮದೇ ಪಕ್ಷದ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಇದ್ದಿರಬಹುದು, ಆದರೆ, ಇಂತಹಾ ಭ್ರಷ್ಟ ಸರಕಾರವನ್ನು ನನ್ನ ರಾಜಕೀಯ ವೃತ್ತಿಜೀವನದಲ್ಲೇ ನೋಡಿಲ್ಲ. ರಾಜ್ಯದಲ್ಲಿ ಬರಗಾಲವಿದೆ, ಮೇವಿನಲ್ಲೂ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ನಾನು ಡಿಸಿಎಂ ಎಂದು ಕರೆಯುವುದೇ ಇಲ್ಲ - ಕೆ ಎನ್ ರಾಜಣ್ಣ.

ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆ ಎಂಗೇಜ್ಮೆಂಟ್
ದೇವೇಗೌಡರು ಸೋಲುವುದನ್ನು ನಾನು ನಿರೀಕ್ಷಿಸಿದ್ದೆ. ಮಧುಗಿರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆಮೇಲೆ ಆ ಹುಡುಗಿಯನ್ನು ಬಿಟ್ಟುಬಿಟ್ಟ. ಅದು ಅಂಡರ್ ಕರೆಂಟ್ ಆಗಿ, ಅದು ಇಲ್ಲಿನ ಜನತೆ ಗೌಡರ ವಿರುದ್ದ ಮತಹಾಕಲು ಕಾರಣವಾಯಿತು ಎನ್ನುವ ಹೇಳಿಕೆಯನ್ನು ರಾಜಣ್ಣ ನೀಡಿದ್ದಾರೆ.

ಕಂಡ ಕಂಡಲ್ಲಿ ದುಡ್ಡು ಹೊಡೆದು ದೇವಸ್ಥಾನಕ್ಕೆ ಹೋಗಿ ಪೂಜೆ
ಕಂಡ ಕಂಡಲ್ಲಿ ದುಡ್ಡು ಹೊಡೆದು ದೇವಸ್ಥಾನಕ್ಕೆ ಹೋಗಿ ಪೂಜೆ, ಹೋಮ ಮಾಡಿಸಿದರೆ ಏನು ಪ್ರಯೋಜನ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಟೀಕಿಸಿರುವ ಕೆ ಎನ್ ರಾಜಣ್ಣ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಎಲ್ಲಿದೆ. ಸರಕಾರ ಇರುವುದು ದೇವೇಗೌಡರ ಮನೆಯ ಸರಕಾರವಿದೆ. ಲಂಚ ತಾಂಡವವಾಡುತ್ತಿದೆ, ಎಲ್ಲೆಲ್ಲೂ ಭ್ರಷ್ಟಾಚಾರ ಎಂದು ರಾಜಣ್ಣ ಕಿಡಿಕಾರಿದ್ದಾರೆ.

ದೇವೇಗೌಡರ ಮನೆಯಲ್ಲಿ ತೀರ್ಮಾನವೇ ಕ್ಯಾಬಿನೆಟ್ ಮೀಟಿಂಗ್
ದೇವೇಗೌಡರ ಮನೆಯಲ್ಲಿ ತೀರ್ಮಾನ ಮಾಡಿಕೊಂಡು ಬಂದಿರುವುದನ್ನೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮಾತನಾಡುತ್ತಾರೆ. ಈ ಸರಕಾರ ಎಷ್ಟು ಬೇಗ ಪತನಗೊಳ್ಳುತ್ತೋ ಅಷ್ಟು ರಾಜ್ಯದ ಜನತೆಗೆ ಕ್ಷೇಮ ಎನ್ನುವ ಮಾತನ್ನು ಕೆ ಎನ್ ರಾಜಣ್ಣ ಹೇಳಿದ್ದಾರೆ.












Click it and Unblock the Notifications