ಇಂಗ್ಲಿಷ್ ಬರಲ್ಲ ಅಂತ ಪ್ರಾಣಕ್ಕೆ ಕುತ್ತು ತಂದುಕೊಂಡ ಬಾಲಕ
ತುಮಕೂರು, ಮೇ 26 : ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಬೇಕು ಎಂದು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಮಾತೃಭಾಷೆ ಕನ್ನಡದ ಜೊತೆ ಇಂಗ್ಲಿಷ್ ಸಾಕು ಎನ್ನುವುದು ಕೆಲವರ ವಾದ. ಇಂಗ್ಲಿಷ್ ಜೊತೆ ಹಿಂದಿಯನ್ನೂ ಕಲಿಸಿ ಎಂದು ಹಲವರ ವಾದ, ಆದರೆ ಇಂದಿಗೂ ಎಷ್ಟೋ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಎಂದರೆ ಕಷ್ಟದ ವಿಷಯ ಎಂದೇ ಭಾವಿಸುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ತನಗೆ ಇಂಗ್ಲಿಷ್ ಬರಲ್ಲ ಅಂತ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ತುಮಕೂರಿನ ಊರ್ಡಿಗೆರೆ ಗ್ರಾಮದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಇಂಗ್ಲಿಷ್ ಭಾಷೆಗೆ ಹೆದರಿ ಬದುಕನ್ನೇ ಕೊನೆಗಾಣಿಸುವ ನಿರ್ಧಾರ ಮಾಡಿದ್ದಾನೆ. ಇಂಗ್ಲಿಷ್ ಬರಲ್ಲ, ಶಾಲಯಲ್ಲಿ ಮಾಡುವ ಇಂಗ್ಲಿಷ್ ಪಾಠ ಅರ್ಥ ಆಗಲ್ಲ, ಇಂಗ್ಲಿಷ್ ಓದಲು, ಬರೆಯಲು ಕಷ್ಟ ಆಗ್ತಿದೆ ಎಂದು ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ. ಇದೇ ಕೊರಗಿನಲ್ಲಿ ಬಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದಾನೆ.
ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಸೋಮಶೇಖರ್ ಹಾಗೂ ಜಯಮ್ಮ ದಂಪತಿಯ ಪುತ್ರ ವಿಷ ಕುಡಿದ 7ನೇ ತರಗತಿ ವಿದ್ಯಾರ್ಥಿ. ಈತ ಊರ್ಡಿಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ತುಮಕೂರಿನ ಕೋತಿತೋಪು ನಗರದಲ್ಲಿ ವಾಸವಿದ್ದ ಸೋಮಶೇಖರ್ ಮತ್ತು ಪತ್ನಿ ಜಯಮ್ಮ ಕೆಲವು ದಿನಗಳ ಹಿಂದೆ ಊರ್ಡಿಗೆರೆ ಗ್ರಾಮಕ್ಕೆ ಬಂದು ನೆಲೆಸಿದ್ದರು. ಹೀಗಾಗಿ ಆರನೇ ತರಗತಿವರೆಗೆ ತುಮಕೂರಿನಲ್ಲಿ ಓದುತ್ತಿದ್ದ ಬಾಲಕ, ಈ ಶೈಕ್ಷಣಿಕ ವರ್ಷದಿಂದ ಊರ್ಡಿಗೆರೆ ಸರ್ಕಾರಿ ಶಾಲೆಗೆ ದಾಖಲಾಗಿದ್ದ ಎನ್ನಲಾಗಿದೆ.

ಇಂಗ್ಲಿಷ್ ಪಾಠ ಅರ್ಥ ಆಗ್ತಿಲ್ಲ ಎಂದಿದ್ದ
ಶಿಕ್ಷಕರು ಮಾಡುತ್ತಿರುವ ಇಂಗ್ಲಿಷ್ ಪಾಠ ಅರ್ಥ ಆಗುತ್ತಿಲ್ಲ, ನಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಆದರೆ ಬಾಲಕನ ಮನಸ್ಥಿತಿ ಅರ್ಥ ಮಾಡಿಕೊಳ್ಳದ ಪೋಷಕರು ಬುದ್ದಿವಾದ ಹೇಳಿ ಶಾಲೆಗೆ ಹೋಗುವಂತೆ ಬಾಲಕನಿಗೆ ತಾಕೀತು ಮಾಡಿದ್ದರು. ಮೊದಲೇ ಖಿನ್ನತೆಗೊಳಗಾಗಿದ್ದ ಬಾಲಕ ಪೋಷಕರ ಮಾತಿನಿಂದ ಬೇಸರಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಮಗ ವಿಷ ಕುಡಿದಿರುವ ವಿಚಾರ ತಂದೆ ತಾಯಿಗೆ ಗೊತ್ತಾಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಕೊನೆಗೆ ಸ್ಥಳೀಯರ ಸಹಾಯ ಪಡೆದು ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಕ್ಷಣ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಿದ್ದು ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಇಂಗ್ಲಿಷ್ ಭಾಷೆಗೆ ಹೆದರದಂತೆ ಬಾಲಕನಿಗೆ ಧೈರ್ಯ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications