'ತಾನು ಕಳ್ಳ, ಪರರ ನಂಬ' ಇದು ಕಾಂಗ್ರೆಸ್ ಪರಿಸ್ಥಿತಿ: ಡಿಸಿಎಂ ಸವದಿ
ತುಮಕೂರು, ಅಕ್ಟೋಬರ್ 23: ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯ ಕೊರತೆ ಇದ್ದು, ಬರೀ ಬಿಜೆಪಿಯನ್ನು ಟೀಕಿಸುವುದಾಗಿದೆ. ತಾನು ಕಳ್ಳ ಪರರ ನಂಬ ಎನ್ನುವಂತ ಸ್ಥಿತಿ ಅವರದ್ದಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಣಗಳಿವೆ. ಅವರ ನಡುವೆ ಹೊಂದಾಣಿಕೆಯೇ ಇಲ್ಲ, ಹೀಗಿರುವಾಗ ಅವರು ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಮುಖ್ಯಮಂತ್ರಿ ಬದಲಾವಣೆಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸವದಿ, ಯತ್ನಾಳ್ ಅವರು ಹೇಳಿರುವ ಹೇಳಿಕೆ ಅದು ಅವರ ವೈಯುಕ್ತಿಕ. ಈ ಬಗ್ಗೆ ನಾನೇನೂ ಹೇಳುವುದಿಲ್ಲ. ಸಿಎಂ ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ಇಲಾಖೆಯ ಬಗ್ಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನಾಲ್ಕು ನಿಗಮಗಳ ಬಸ್ ಗಳಲ್ಲಿ ಪ್ರತಿನಿತ್ಯ ಎರಡು ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಪ್ರಸ್ತುತ ಶೇ.30ರಷ್ಟು ಮಂದಿ ಮಾತ್ರವೇ ಪ್ರಯಾಣಿಸುತ್ತಿದ್ದಾರೆ. ಸದ್ಯ ನೌಕರರಿಗೆ ವೇತನ ನೀಡಲು ಹಣ ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಎಂದರು.












Click it and Unblock the Notifications