ರೈಲ್ವೆ ನಿಲ್ದಾಣದಲ್ಲಿ ಕಾಟಾಚಾರದ ಕೊರೊನಾ ಸ್ಕ್ಯಾನಿಂಗ್: ಅಧಿಕಾರಿ ಅಮಾನತು
ತುಮಕೂರು, ಮಾರ್ಚ್ 21: ಕೊರೊನಾ ದೇಶಾದ್ಯಂತ ಹರಡುತ್ತಿದ್ದು, ಜನರು ಭೀತಿಯಲ್ಲಿರುವಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ಕಾಟಾಚಾರದ ಸ್ಕ್ಯಾನಿಂಗ್ ಮಾಡಿ ಅಮಾನತುಗೊಂಡಿದ್ದಾನೆ.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಯೊಬ್ಬ ರೈಲ್ವೆ ನಿಲ್ದಾಣದಿಂದ ಹೊರ ಹೋಗುವ ಪ್ರಯಾಣಿಕರಿಗೆ ಕಾಟಾಚಾರದ ಸ್ಕ್ಯಾನಿಂಗ್ ಮಾಡಿದ್ದಾನೆ. ಫೋನಿನಲ್ಲಿ ಮಾತನಾಡುತ್ತಾ ಸ್ಕ್ಯಾನಿಂಗ್ ಯಂತ್ರ ಕೈಯಲ್ಲಿದ್ದರೂ ಹಾಗೆಯೇ ಪ್ರಯಾಣಿಕರನ್ನು ಕಳುಹಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ತುಮಕೂರು ಆರೋಗ್ಯ ಇಲಾಖೆಯ ಜ್ಯೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ನಿರ್ಲಕ್ಷ್ಯ ತೋರಿದ ಅಧಿಕಾರಿ. ಈತ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕಾದರೆ ಬೇಜವಾಬ್ದಾರಿ ವರ್ತನೆ ತೋರಿದ್ದಾನೆ.

ಕಳೆದ ಎರಡು ದಿನಗಳಿಂದ ತುಮಕೂರಿನ ಸಿದ್ದಗಂಗಾ ಮಠ ಹಾಗೂ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಸಮರ ಸಾರಿದರೆ, ಈತ ಮಾತ್ರ ನಿರ್ಲಕ್ಷ್ಯ ತೋರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಮೊಬೈಲಿನಲ್ಲಿ ಮಾತನಾಡುತ್ತಾ ಕಾಟಾಚಾರಕ್ಕೆ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತು ಮಾಡಲಾಗಿದೆ. ನರಸಿಂಹಮೂರ್ತಿಯ ಬೇಜವಾಬ್ದಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ಆಧಾರದ ಮೇಲೆ ಡಿಎಚ್ಒ ಡಾ.ಚಂದ್ರಿಕಾ ಬೇಕಾಬಿಟ್ಟಿ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ಈತನ ನಿರ್ಲಕ್ಷ್ಯದ ಕೆಲಸವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಛೀಮಾರಿ ಹಾಕಿದ್ದಾರೆ. ದೇಶವೇ ಅಪಾಯದಲ್ಲಿದ್ದರೂ ಈ ಅಧಿಕಾರಿಯ ಅಸಡ್ಡೆತನ ಜನರನ್ನು ಕೆರಳಿಸುವಂತೆ ಮಾಡಿತ್ತು.












Click it and Unblock the Notifications