ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ಅಂತಿಮವಾಗಿಲ್ಲ; ಬಿಎಸ್ವೈ
ತುಮಕೂರು, ಜೂ15: "ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಗುರಿ. ವಾರಕ್ಕೆ ಒಂದೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ ತುಮಕೂರಿನಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, "ಎಲ್ಲಾ ವರ್ಗದ ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅನೇಕ ಜನ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಯಾರು ಯಾರು ಬರುವುದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೋ ಅವರನ್ನು ಸೇರಿಸಿಕೊಂಡು ಪಕ್ಷ ಬಲಪಡಿಸುತ್ತೇವೆ. ಈಗಾಗಲೇ ಅನೇಕ ಜನ ಬರುತ್ತಿದ್ದಾರೆ. ಮತ್ತೆ ಯಾರು ಬರುತ್ತಾರೋ ಬರಲಿ, ಪಕ್ಷಕ್ಕೆ ಬರುವವರನ್ನು ಬೇಡ ಅನ್ನುವುದಿಲ್ಲ" ಎಂದರು.
ವಿಜಯೇಂದ್ರ ಸ್ಪರ್ಧೆ ಖಚಿತ; "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದು ಖಚಿತ. ಆದರೆ ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ" ಎಂದು ಯಡಿಯೂರಪ್ಪ ತಿಳಿಸಿದರು.

"ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಗುರಿ. ಈ ಹಿನ್ನೆಲೆ ರಾಜ್ಯ ಪ್ರವಾಸ ಪ್ರಾರಂಭವಾಗಿದೆ. ವಾರಕ್ಕೆ ಒಂದೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುತ್ತೇವೆ" ಎಂದರು.
ತನಿಖೆ ಬಳಿಕ ಸತ್ಯ ಹೊರ ಬರಲಿದೆ; "ನಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ನಿಂದ ಯಂಗ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ 2010ರಲ್ಲಿ ಪರಭಾರೆ ಮಾಡಲಾಗಿತ್ತು. ಗಾಂಧಿ ಕುಟುಂಬದ ಒಡೆತನದ ಯಂಗ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಈ ಖರೀದಿ ಪ್ರಕ್ರಿಯೆ ವೇಳೆ ಹಲವು ಅಕ್ರಮ ಎಸಗಿದೆ ಅನ್ನೋ ಆರೋಪದ ಮೇಲೆ ತನಿಖೆ ನಡೆಯುತ್ತಿದೆ" ಎಂದು ಯಡಿಯೂರಪ್ಪ ಹೇಳಿದರು.

"ಈ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಬಿಜೆಪಿ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತದೋ ಅವರನ್ನ ತನಿಖೆ ಮಾಡುತ್ತಾರೆ. ಯಾರ ಬಗ್ಗೆ ಏನು ಅನುಮಾನ ಇರುತ್ತದೋ ಆ ಬಗ್ಗೆ ತನಿಖೆ ಮಾಡುತ್ತಾರೆ. ತನಿಖೆ ಬಳಿಕ ಸತ್ಯ ಹೊರ ಬರಲಿದೆ. ನಿರಪರಾಧಿಯಾಗಿದ್ದರೆ ಯಾವುದೇ ಗೊಂದಲವಿಲ್ಲದೆ ಹೊರಗೆ ಬರುತ್ತಾರೆ. ಆರೋಪ ಸಾಬೀತಾದರೆ ಎಲ್ಲರಂತೆ ಶಿಕ್ಷೆಯಾಗುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು"ಎಂದರು.












Click it and Unblock the Notifications