ತುಮಕೂರಿನಿಂದ ಜ್ಯೋತಿ ಗಣೇಶ್ ಅಖಾಡಕ್ಕೆ, ಶಿವಣ್ಣಗಿಲ್ಲ ಬಿಜೆಪಿ ಟಿಕೆಟ್
ತಿಪಟೂರು, ಜುಲೈ 10: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಹೆಸರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ-ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮವೊದರಲ್ಲಿ ಪಾಲ್ಗೊಂಡಿದ್ದ ಅವರು, ನನ್ನ ಎಡ-ಬಲದಲ್ಲಿ ಕೂತಿರುವವರಿಗೆ (ನಾಗೇಶ್ ಹಾಗೂ ಜ್ಯೋತಿಗಣೇಶ್) ಪಕ್ಷದ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ. ಅಂದರೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ನಾಗೇಶ್ ಹಾಗೂ ತುಮಕೂರು ನಗರದಿಂದ ಜ್ಯೋತಿಗಣೇಶ್ ಸ್ಪರ್ಧಿಸುವುದು ಖಚಿತವಾದಂತಾಗಿದೆ.

ಅಲ್ಲಿಗೆ ಮಾಜಿ ಸಚಿವ- ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರಿಗೆ ಈ ಬಾರಿ ತುಮಕೂರು ನಗರದ ಟಿಕೆಟ್ ಇಲ್ಲ ಎಂಬುದು ನಿಕ್ಕಿ ಆದಂತಾಗಿದೆ. ಬಿಎಸ್ ಯಡಿಯೂರಪ್ಪನವರ ಕೆಲವು ನಿರ್ಧಾರಗಳಿಗೆ ಅತೃಪ್ತಿ ವ್ಯಕ್ತಪಡಿಸಿದ ಮುಖಂಡರ ಪೈಕಿ ಶಿವಣ್ಣ ಕೂಡ ಇದ್ದರು. ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು.
ಆ ನಂತರ ಬೆಂಗಳೂರಿನಲ್ಲಿ ಕೂಡ ಅತೃಪ್ತರ ಸಮಾವೇಶ ನಡೆದಿತ್ತು. ಅದರಲ್ಲೂ ಶಿವಣ್ಣ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ಶಿವಣ್ಣ ಮತ್ತಿತರರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಬೇಕು ಎಂದು ದೆಹಲಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ತೀರ್ಮಾನ ಆಗಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ ಶಿವಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದಂತಾಗಿದೆ.
ತುಮಕೂರು ನಗರ ಕ್ಷೇತ್ರದಿಂದ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಜ್ಯೋತಿಗಣೇಶ್ ಮತಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವಣ್ಣ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ಅದಕ್ಕೂ ಮುನ್ನ ಸತತವಾಗಿ ನಾಲ್ಕು ಬಾರಿ ಅದೇ ಕ್ಷೇತ್ರದಿಂದ ಸೊಗಡು ಶಿವಣ್ಣ ಜಯ ಗಳಿಸಿದ್ದರು.












Click it and Unblock the Notifications