ಐಎಂಎ ಮಾದರಿಯಲ್ಲಿ ತುಮಕೂರಿನಲ್ಲೊಂದು ಬ್ಲೇಡ್ ಸಂಸ್ಥೆ ಕರ್ಮಕಾಂಡ
ತುಮಕೂರು, ಜೂನ್ 14: ದೇಶದಾದ್ಯಂತ ಸುದ್ದಿಯಾಗಿರುವ ಬೆಂಗಳೂರಿನ ಐಎಂಎ ಸಂಸ್ಥೆಯ ವಂಚನೆ ಪ್ರಕರಣ ಇನ್ನೂ ಬಿಸಿಯಾಗಿರುವಾಗಲೇ ತುಮಕೂರಿನಲ್ಲಿ ಇದೇ ಮಾದರಿಯ ಸಂಸ್ಥೆಯೊಂದು ಹೂಡಿಕೆದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ನಗರದ ಈಜಿಮೈಂಡ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜನರಿಂದ ಹಣ ಹೂಡಿಕೆ ಮಾಡಿಕೊಂಡು ಮೋಸ ಮಾಡಿದೆ ಎನ್ನುವ ಪ್ರಕರಣ ಬೆಳಕಿಗೆ ಬಂದಿದೆ.
ಮುಸ್ಲಿಂ ಮುಖಂಡ ನಿಸಾರ್ ಅಹ್ಮದ್ ಇಂದು ತುಮಕೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂಚನೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 500 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಅಂದಾಜು ನೀಡಿದ್ದಾರೆ.

ಮಹಮ್ಮದ್ ಅಸ್ಲಂ ಎಂಬ ವ್ಯಕ್ತಿ ಹೆಚ್ಚು ಬಡ್ಡಿಯ ಆಸೆ ತೋರಿಸಿ ಜನರಿಂದ ಹೂಡಿಕೆ ಮಾಡಿಸಿಕೊಂಡು ಹಣ-ಬಡ್ಡಿ ಎರಡೂ ನೀಡದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಮ್ಮದ್ ಅಸ್ಲಂ ಎರಡು ವರ್ಷದ ಹಿಂದೆ ಸಂಸ್ಥೆ ಸ್ಥಾಪಿಸಿದ್ದ ಎನ್ನಲಾಗಿದೆ.
ಸಾಮಾನ್ಯ ಹೂಡಿಕೆ, ಶಿಕ್ಷಣ, ಮದುವೆ ಎಂಬ ಮೂರು ವಿಭಾಗ ಮಾಡಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದ ಅಸ್ಲಂ. 50,000 ಹೂಡಿಕೆ ಮಾಡಿದರೆ 3000 ಸಾವಿರ, ಒಂದು ಲಕ್ಷ ಹೂಡಿಕೆ ಮಾಡಿದರೆ 6000 ರೂಪಾಯಿ. 5 ಲಕ್ಷ ಹೂಡಿಕೆ ಮಾಡಿದರೆ 30,000 ರೂಪಾಯಿ ಹಣ ಬಡ್ಡಿಯಾಗಿ ನೀಡುವುದಾಗಿ ಹೇಳಿದ್ದ ಎಂದು ನಿಸಾರ್ ಅವರು ಹೇಳಿದ್ದಾರೆ.
ತುಮಕೂರು, ಬೆಂಗಳೂರು, ಕೇರಳ, ಮಧುರೈ ಇನ್ನೂ ಹಲವು ಊರುಗಳಲ್ಲಿನ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಮಹಮ್ಮದ್ ಅಸ್ಲಂ ಹಣ ತೆಗೆದುಕೊಂಡು ಪರಾರಿ ಆಗಿದ್ದಾನೆ ಎಂದು ಆರೋಪಿಸಲಾಗಿದೆ.












Click it and Unblock the Notifications