60 ದಿನಗಳ ಕಾಲ ನಾವು ಶಬರಿಮಲೆ ಕಾಯುತ್ತೇವೆ: ರಾಹುಲ್ ಈಶ್ವರ್
ತಿರುವನಂತಪುರಂ, ನವೆಂಬರ್ 14: ಸುಪ್ರಿಂಕೋರ್ಟ್ ತೀರ್ಪು ಮರುಪರಿಶೀಲನೆ ಮಾಡುವವರೆಗೆ ನಾವು ಶಬರಿಮಲೆಯನ್ನು-ರಕ್ಷಿಸಿಕೊಳ್ಳುತ್ತೇವೆ ಎಂದು ಅಯ್ಯಪ್ಪ ಧರ್ಮಸೇನಾ ಅಧ್ಯಕ್ಷ ರಾಹುಲ್ ಈಶ್ವರ್ ಹೇಳಿದ್ದಾರೆ.
ಸುಪ್ರಿಂಕೋರ್ಟ್ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಬೇಕೆಂಬ ಅರ್ಜಿಗಳನ್ನು ಜನವರಿ 22 ಕ್ಕೆ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರಿಂ ಕೋರ್ಟ್ ಹೇಳಿದ್ದು, ಈ 60 ದಿನ ನಾವು ಶಬರಿಮಲೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಮರುಪರಿಶೀಲನಾ ಅರ್ಜಿ ತೀರ್ಪು ಹೊರ ಬರುವವರೆಗೆ ಯಾವುದೇ ಮಹಿಳೆಯರು ಶಬರಿಮಲೆಗೆ ತೆರಳದಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು ಎಂದು ಸಹ ರಾಹುಲ್ ಈಶ್ವರ್ ಮನವಿ ಮಾಡಿದ್ದಾರೆ. ಹಾಗೊಮ್ಮೆ ಈ ಅವಧಿಯ ಒಳಗೆ ಮಹಿಳಾ ಹೊರಾಟಗಾರ್ತಿಯನ್ನು ಪ್ರವೇಶಿಸಲು ಯತ್ನಿಸಿದರೆ ನಾವು ತಡೆಯುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಈಶ್ವರ್.

ನ್ಯಾಯಾಲಯದ ಇತಿಹಾಸದಲ್ಲಿ ಹೀಗೆ ತೀರ್ಪಿನ ಮರುಪರಿಶೀಲನೆ ನಡೆದಿರುವುದು ಬಹು ಅಪರೂಪ, ಆದರೆ ಶಬರಿಮಲೆ ವಿಷಯದಲ್ಲಿ ನ್ಯಾಯಾಲಯವು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿರುವುದು ಐತಿಹಾಸಿಕ ಮತ್ತು ಇದು ನಮಗೆ ಅರ್ಧ ಗೆಲುವು ತಂದುಕೊಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಯ್ಯಪ್ಪ ದೇವಾಲಯವು ನವೆಂಬರ್ 16ರಿಂದ ದರ್ಶನಕ್ಕೆ ತೆರೆಯುತ್ತಿದ್ದು, ನಾವು ನವೆಂಬರ್ 15 ರಿಂದ ದೇವಾಲಯದ ರಕ್ಷಣೆಗೆ ನಿಲ್ಲುತ್ತೇವೆ ಜನವರಿ 20 ಕ್ಕೆ ದೇವಾಲಯ ಬಾಗಿಲು ಮುಚ್ಚುವವರೆಗೆ ನಾವು ದೇವಾಲಯದ ರಕ್ಷಣೆ ಮಾಡುತ್ತೇವೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.
ಜಲ್ಲಿಕಟ್ಟು ಮಾದರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಹ ನಾವು ಒತ್ತಾಯಿಸುತ್ತೇವೆ ಎಂದಿರುವ ಈಶ್ವರ್, ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರಿಂಕೋರ್ಟ್ ನಿಷೇಧಿಸಿತು ಆದರೆ ಕೇಂದ್ರಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಲ್ಲಿಕಟ್ಟು ಮತ್ತೆ ಪ್ರಾರಂಭವಾಗುವಂತೆ ಮಾಡಿತು. ಹಾಗೆಯೇ ಶಬರಿಮಲೆ ವಿಷಯದಲ್ಲೂ ಸುಗ್ರೀವಾಜ್ಞೆ ಹೊರಡಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.











Click it and Unblock the Notifications