ಶಬರಿಮಲೆ ಬರ್ತಿದ್ದಾರೆ ತೃಪ್ತಿ ದೇಸಾಯಿ, ಸರ್ಕಾರವೇ ಭರಿಸಬೇಕಂತೆ ವೆಚ್ಚ
ತಿರುವನಂತಪುರಂ, ನವೆಂಬರ್ 15: ದೇವಾಲಯಗಳಿಗೆ ಮಹಿಳೆಯರ ಪ್ರವೇಶಕ್ಕಾಗಿ ಹೋರಾಟ ಆರಂಭಿಸಿದ ತೃಪ್ತಿ ದೇಸಾಯಿ ಅವರು ಶಬರಿಮಲೆಗೆ ಬರುತ್ತಿದ್ದು, ಅವರ ಖರ್ಚನ್ನೆಲ್ಲಾ ಕೇರಳ ಸರ್ಕಾರವೇ ಭರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನವೆಂಬರ್ 17ಕ್ಕೆ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯುತ್ತಿದ್ದು, ನವೆಂಬರ್ 16ರ ಮಧ್ಯಾಹ್ನ ತಾನು ಸೇರಿದಂತೆ ಏಳು ಮಹಿಳೆಯರು ಕೇರಳಕ್ಕೆ ಬರುತ್ತೇವೆ ಅಲ್ಲಿಂದಲೇ ನಮ್ಮ ಭದ್ರತೆಯ ಪೂರ್ಣ ಜವಾಬ್ದಾರಿಯನ್ನು ಕೇರಳ ಸರ್ಕಾರ ವಹಿಸಿಕೊಳ್ಳಬೇಕು ಎಂದು ಅವರು ಕೇರಳ ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಮಗೆ ಆರ್ಎಸ್ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರಿಂದ ಜೀವ ಭಯ ಇದೆ. ಸಾಮಾಜಿಕ ಜಾಲತಾಣದಲ್ಲೂ ನಮಗೆ ಬೆದರಿಕೆಗಳು ಬಂದಿದ್ದು, ಕೇರಳಕ್ಕೆ ಕಾಲಿಟ್ಟಕೂಡಲೇ ಕೈ-ಕಾಲು ಕತ್ತರಿಸುವುದಾಗಿ ಹೇಳಿದ್ದಾರೆ ಹಾಗಾಗಿ ನಾವು ವಿಮಾನ ನಿಲ್ದಾಣದಲ್ಲಿ ಇಳಿದ ಸಮಯದಿಂದಲೂ ಭದ್ರತೆಯ ಜವಾಬ್ದಾರಿ ಸರ್ಕಾರದ್ದೇ ಎಂದು ಸಿಎಂ ಪಿಣರಾಯಿ ವಿಜಯನ್ಗೆ ಬರೆದಿರುವ ದೀರ್ಘ ಪತ್ರದಲ್ಲಿ ಅವರು ಹೇಳಿದ್ದಾರೆ.

ಕಾರ್ಯಕ್ರಮ ವೇಳಾಪಟ್ಟಿ ಸರ್ಕಾರಕ್ಕೆ
ತಮ್ಮ ಪೂರ್ಣ ಕಾರ್ಯಕ್ರಮದ ವೇಳಾಪಟ್ಟಿಯನ್ನೇ ನೀಡಿರುವ ತೃಪ್ತಿ ದೇಸಾಯಿ, ತಮಗೆ ಉಳಿದುಕೊಳ್ಳಲು ಹಾಗೂ ಅಲ್ಲಿಂದ ದೇವಸ್ಥಾನಕ್ಕೆ ತೆರಳಲು ವಾಹನದ ವ್ಯವಸ್ಥೆಯನ್ನೂ ನೋಡಿಕೊಳ್ಳಬೇಕು ಎಂದು ತೃಪ್ತಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

'ನಮ್ಮಿಂದ ಶಬರಿಮಲೆಯಲ್ಲಿ ಗೊಂದಲ ಬೇಡ'
ನಮ್ಮಿಂದ ಶಬರಿಮಲೆಯಲ್ಲಿ ಗೊಂದಲ ಆಗುವುದು ಬೇಡ ಎಂದು ಪತ್ರದಲ್ಲಿ ಹೇಳಿರುವ ಅವರು, ನಾವು ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಅಲ್ಲಿನ ಪ್ರತಿಯೊಬ್ಬರ (ಪ್ರತಿಭಟನಾಕಾರರ) ಮೇಲೂ ಕಣ್ಣಿಡುವಂತೆ ಪೊಲೀಸರಿಗೆ ಸೂಚಿಸುವಂತೆಯೂ ಮನವಿ ಮಾಡಿದ್ದಾರೆ.

ಆಹಾರ, ವಸತಿ ಎಲ್ಲ ವೆಚ್ಚ ಸರ್ಕಾರದ್ದೆ
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ತೃಪ್ತಿ ಅವರು, ಕೇರಳದಲ್ಲಿ ಇರುವಷ್ಟು ದಿವನ ನಮ್ಮ ಆಹಾರದ ಖರ್ಚು, ವಸತಿ ಖರ್ಚು, ಸಂಚಾರದ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂದು ಹೇಳಿದ್ದಾರೆ. ತೃಪ್ತಿ ದೇಸಾಯಿ ಜೊತೆ ಆರು ಮಹಿಳಾ ಹೋರಾಟಗಾರ್ತಿಯರು ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು ಎಲ್ಲರ ಖರ್ಚನ್ನೂ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಶನಿ ಸಿಂಗ್ನಾಪುರಕ್ಕೆ ಪ್ರವೇಶಿಸಿದ್ದರು
ತೃಪ್ತಿ ದೇಸಾಯಿ ಅವರು ಶನಿ ಸಿಂಗ್ಲಾಪುರದ ಶನಿ ದೇವಾಸ್ಥನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಕಾನೂನು ಹೋರಾಟ ಮಾಡಿದ್ದರು. ಅಲ್ಲಿಂದಲೇ ದೇವಸ್ಥಾನಗಳಿಗೆ ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಬೇಕು ಎಂಬ ಕೂಗು ಜೋರಾಗಿ ಎದ್ದಿತ್ತು.












Click it and Unblock the Notifications