ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಅನುಮತಿ
ತಿರುವನಂತಪುರಂ, ಡಿಸೆಂಬರ್ 2: ಶಬರಿಮಲೆ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಕೋವಿಡ್ ಸೋಂಕಿನ ಮಾರ್ಗಸೂಚಿ ನಿರ್ಬಂಧಗಳ ಕಾರಣದಿಂದ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಮಿತಿಯನ್ನು ಹೆಚ್ಚಿಸಲಾಗಿದೆ. ದೈನಂದಿನ ಭಕ್ತರ ಸಂಖ್ಯೆಯನ್ನು ಹೆಚ್ಚಿಸಲು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ.
ಪ್ರಸ್ತುತ ಇರುವ ದೈನಂದಿನ ಭಕ್ತರ ಪ್ರವೇಶದ ಗರಿಷ್ಠ ಮಿತಿಯನ್ನು 1,000 ದಿಂದ 2,000ಕ್ಕೆ ಹೆಚ್ಚಿಸಲಾಗುವುದು. ಹಾಗೆಯೇ ವಾರಾಂತ್ಯಗಳು ಮತ್ತು ರಜೆ ದಿನಗಳಲ್ಲಿ 2,000ಕ್ಕೆ ನಿಗದಿಗೊಳಿಸಲಾಗಿರುವ ಭಕ್ತರ ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸಲಾಗಿದೆ.
ಕೋವಿಡ್-19 ಮಾರ್ಗಸೂಚಿಗಳಿಗೆ ಅನುಗುಣವಾಗಿ ದೇವಸ್ಥಾನದ ಆವರಣ ಮತ್ತು ಶಿಬಿರ ನೆಲೆಗಳಲ್ಲಿ ಅಗತ್ಯ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆನ್ಲೈನ್ ಸರದಿ ವ್ಯವಸ್ಥೆಗೆ ಅನುಗುಣವಾಗಿ ಶಬರಿಮಲೆ ಯಾತ್ರೆಗೆ ತೆರಳಲು ಟಿಕೆಟ್ಗಳನ್ನು ಕಾಯ್ದಿರಿಸಲು ಅವಕಾಶ ನೀಡಲಾಗಿದೆ.

ಶಬರಿಮಲೆಗೆ ತೆರಳಲು ಬರುವ ಭಕ್ತರು ನಿಳಕ್ಕಳ್ ಮತ್ತು ಪಂಬಾ ಶಿಬಿರಗಳಿಗೆ ಬರುವ 24 ಗಂಟೆ ಮುನ್ನ ಕೋವಿಡ್ ನೆಗೆಟಿವ್ ಪರೀಕ್ಷೆಯ ವರದಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅನೇಕ ಕಡೆ ಕೋವಿಡ್ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಉಳಿದುಕೊಳ್ಳಲು ಭಕ್ತರಿಗೆ ಅವಕಾಶ ನೀಡುತ್ತಿಲ್ಲ.












Click it and Unblock the Notifications