Breaking: ಕೇರಳ ಸಿಪಿಎಂ ನಾಯಕನ ಹತ್ಯೆ; 8 ಬಿಜೆಪಿ ಕಾರ್ಯಕರ್ತರ ಕೈವಾಡ
ತಿರುವನಂತಪುರಂ, ಆಗಸ್ಟ್ 16: ಕೇರಳದ ಪಾಲಕ್ಕಾಡ್ ಸಮೀಪದ ಮಲಂಪುಳದಲ್ಲಿ ನಡೆದ ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಶಾಜಹಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹತ್ಯೆಯ ಹಿಂದೆ ಎಂಟು ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಮೃತನ ಸ್ನೇಹಿತ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಬಂಧಿಸಲಾಗಿರುವ ಇಬ್ಬರಲ್ಲಿ ಒಬ್ಬರು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದರೆ ಮತ್ತು ಇನ್ನೊಬ್ಬರು ಹಿಂದಿನಿಂದ ಕೊಲೆ ಮಾಡಿದವರಿಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಎಂಟು ಆರೋಪಿಗಳ ಪೈಕಿ ಬಂಧಿತರೂ ಸೇರಿದ್ದಾರೆ. ಇಬ್ಬರನ್ನೂ ಬೇರೆ ಬೇರೆ ಅಡಗುತಾಣಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಶಹಜಹಾನ್ನ ಸ್ನೇಹಿತ ಸುರೇಶ್ ಎಂಬಾತ ಪೊಲೀಸರಿಗೆ ಹೇಳಿಕೆ ನೀಡಿದ್ದು, ಹತ್ಯೆಯ ಹಿಂದೆ ಎಂಟು ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದಿದ್ದಾರೆ.
ರಾಜಕೀಯ ಕಾರಣಗಳು ಕೊಲೆಗೆ ಕಾರಣವಾಗಿವೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಆದರೆ, ಈ ಹಂತದಲ್ಲಿ ಇದನ್ನು ರಾಜಕೀಯ ಕೊಲೆ ಎನ್ನಲಾಗದು ಎಂದು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ಪಾಲಕ್ಕಾಡ್ ಉಪ ಪೊಲೀಸ್ ವರಿಷ್ಠಾಧಿಕಾರಿ ವಿ ಕೆ ರಾಜು ಅವರ ನೇತೃತ್ವದಲ್ಲಿ ಶಾಜಹಾನ್ ಹತ್ಯೆ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ನಡೆದ ಶಾಜಹಾನ್ ಕೊಲೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಕೊಲೆ ಹಿಂದೆ ಆರೆಸ್ಸೆಸ್-ಬಿಜೆಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ. ಆದರೆ, ವಿರೋಧ ಪಕ್ಷಗಳು ಮತ್ತು ಕೆಲವು ಹಿರಿಯ ನಾಯಕರು ಅಂತಹ ಹೇಳಿಕೆಗಳನ್ನು ನೀಡಲು ನಿರಾಕರಿಸಿದ್ದಾರೆ.
ಕೇರಳದ ಪಾಲಕ್ಕಾಡ್ನ ಮರುತರೋಡ್ನ ಸಿಪಿಐ (ಎಂ) ಸ್ಥಳೀಯ ಸಮಿತಿ ಸದಸ್ಯ ಶಾಜಹಾನ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಹತ್ಯೆ ಮಾಡಲಾಗಿದೆ. ಪೊಲೀಸರ ಆರಂಭಿಕ ವರದಿಗಳ ಪ್ರಕಾರ, ಶಾಜಹಾನ್ ಮೇಲೆ 5 ರಿಂದ 8 ಜನರ ಗುಂಪು ಅವರ ಮನೆಯ ಬಳಿಯೇ ದಾಳಿ ಮಾಡಿ ಕೊಲೆ ಮಾಡಿದೆ ಎಂದಿದೆ.
ಇನ್ನು, ಬಿಜೆಪಿ ತನ್ನ ಕಾರ್ಯಕರ್ತರ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ಶಾಜಹಾನ್ರನ್ನು ಆರ್ಎಸ್ಎಸ್ ಕೊಂದಿದೆ ಎಂದು ಸಿಪಿಎಂ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೃಷ್ಣಕುಮಾರ್ ಹೇಳಿದ್ದಾರೆ.
'ಅರ್ಜುನ್ ಆಯಂಕಿ ಅವರಂತಹ ಸಿಪಿಎಂ ಕ್ರಿಮಿನಲ್ಗಳೊಂದಿಗೆ ಶಾಜಹಾನ್ ನಿಕಟ ಸಂಪರ್ಕ ಹೊಂದಿದ್ದಾರೆ. ಸಿಪಿಎಂ ತೊರೆದು ಬಿಜೆಪಿ ಸೇರಿರುವವರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ನಿರಾಧಾರವಾಗಿದ್ದು, ಆ ಪಕ್ಷದ ಯಾರನ್ನೂ ಆರೋಪಿಗಳೆಂದು ಹೆಸರಿಸುವುದಿಲ್ಲ' ಎಂದು ಸಿ.ಕೃಷ್ಣಕುಮಾರ್ ಹೇಳಿದ್ದಾರೆ.
Recommended Video