ನ.16ರಂದು ಬಾಗಿಲು ತೆರೆಯಲಿದೆ ಶಬರಿಮಲೆ ದೇವಾಲಯ
ತಿರುವನಂತಪುರಂ, ನವೆಂಬರ್ 10 : ಮಂಡಲ ಮಕರವಿಳಕ್ಕು ವಾರ್ಷಿಕ ಪೂಜಾ ಕಾರ್ಯಗಳ ಅಂಗವಾಗಿ ನವೆಂಬರ್ 16ರಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.
ನವೆಂಬರ್ 16ರಿಂದ ಎರಡು ತಿಂಗಳ ಕಾಲ ದೇವಾಲಯದ ಬಾಗಿಲು ತೆರೆದಿರುತ್ತದೆ. ಮೇಲಸಂತಿ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಕಲಶಾಭಿಷೇಕ ನಡೆಸುವ ಮೂಲಕ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗುತ್ತದೆ.
ಮಂಡಲ ಮಕರವಿಳಕ್ಕು ಅಂಗವಾಗಿ ದೇವಾಲಯದ ಬಾಗಿಲು ತೆರೆದ ಬಳಿಕ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆಗಮಿಸಲಿದ್ದಾರೆ.

ಶಬರಿಮಲೆ ಕ್ಷೇತ್ರಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.
ಈ ತೀರ್ಪನ್ನು ಪುನರ್ ಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ನವೆಂಬರ್ 17ರೊಳಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಈ ಕುರಿತ ತೀರ್ಪು ಪ್ರಕಟಿಸಲಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಆರು ಮಂದಿ ಮಹಿಳೆಯರ ಜೊತೆ ಶಬರಿಮಲೆ ದೇವಾಲಯ ಪ್ರವೇಶಿಸಲು ಪ್ರಯತ್ನ ನಡೆಸಿದ್ದರು. ಭಕ್ತರು ಇದಕ್ಕೆ ಅಡ್ಡಿ ಪಡಿಸಿದ್ದರು. ಇಂದರಿಂದಾಗಿ ದೇವಾಲಯ, ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನವೆಂಬರ್ 17ರೊಳಗೆ ಶಬರಿಮಲೆ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಯ ತೀರ್ಪು ಬರುವುದರಿಂದ ಕೇರಳದಲ್ಲಿ ಭದ್ರತೆ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.












Click it and Unblock the Notifications