ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳ ರಾಜ್ಯ ಬಂದ್ ಗೆ ಕರೆ
ತಿರುವನಂತಪುರಂ, ಜನವರಿ 2 : ಶಬರಿ ಮಲೆ ಅಯ್ಯಪ್ಪ ದೇಗುಲಕ್ಕೆ ಬುಧವಾರ ನಲವತ್ತರ ಹರೆಯದ ಇಬ್ಬರು ಮಹಿಳೆಯರು ಪ್ರವೇಶ ಮಾಡಿದ ಸುದ್ದಿ ಕೇರಳದ ಪಥನಂಥಿಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾ ಹಲವು ಕಡೆ ಮಳಿಗೆಗಳನ್ನು ಮುಚ್ಚಿಸಿದರು ಹಾಗೂ ರಸ್ತೆ ತಡೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಮೆರವಣಿಗೆ, ಸಭೆಗಳನ್ನು ನಡೆಸಿದರು. ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ, ಇಬ್ಬರು ಮಹಿಳೆಯರು ಪ್ರಾರ್ಥನೆ ಸಲ್ಲಿಸಿರುವ ಈ ದಿನವನ್ನು ಕಪ್ಪು ದಿನ ಎಂದು ಬಣ್ಣಿಸಿದರು. ತಿರುವನಂತಪುರಂನಲ್ಲಿರುವ ರಾಜ್ಯ ಕಾರ್ಯಾಲಯದ ಹೊರಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಶಬರಿಮಲೆ ಪ್ರಹಸನ: ಮಹಿಳೆಯರ ಪ್ರವೇಶದಿಂದ ಮುಚ್ಚಿದ ಬಾಗಿಲಿನವರೆಗೆ...
ಬಿಜೆಪಿ ಮಹಿಳಾ ಮೋರ್ಚಾದ ಐವರು ಸದಸ್ಯೆಯರು ಕಾರ್ಯಾಲಯ ಪ್ರವೇಶಿಸದಂತೆ ಪೊಲೀಸರು ತಡೆದರು. ಪೊಲೀಸರ ಭದ್ರತೆಯಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಬಿಜೆಪಿಯಿಂದ ಎರಡು ದಿನಗಳ ಪ್ರತಿಭಟನೆಗೆ ಕರೆ ನೀಡಲಾಗಿದೆ. ದೇಗುಲದ ಹಲವು ಕಚೇರಿಗಳು ಮುಚ್ಚಲಾಗಿದೆ. ದೇವಳದ ಪಾವಿತ್ರ್ಯ ಹಾಳಾಗಿದೆ ಎಂಬ ಕಾರಣಕ್ಕೆ ಕೆಲವು ಭಕ್ತರು ತಮ್ಮ ಯಾತ್ರೆಯನ್ನು ಅರ್ಧ ದಾರಿಗೆ ನಿಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ನಂತರ ಇದೇ ಮೊದಲ ಬಾರಿ
ಶಬರಿಮಲೆ ದೇಗುಲವನ್ನು ಎಲ್ಲ ವಯೋಮಾನ ಮಹಿಳೆಯರೂ ಪ್ರವೇಶಿಸಬಹುದು ಎಂದು ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮೊದಲ ಬಾರಿಗೆ ಹತ್ತರಿಂದ ಐವತ್ತು ವರ್ಷದೊಳಗಿನ ಮಹಿಳೆಯರಾದ ಬಿಂದು ಹಾಗೂ ಕನಕದುರ್ಗಾ ದೇವಳ ಪ್ರವೇಶ ಮಾಡಿ, ಅಯ್ಯಪ್ಪನ ದರ್ಶನ ಪಡೆದು ಬಂದಿದ್ದಾರೆ.
ಪ್ರವೇಶ ಖಚಿತ ಪಡಿಸಿದ ಪಿಣರಾಯಿ ವಿಜಯನ್
ಬಿಂದು ಹಾಗೂ ಕನಕದುರ್ಗಾ ದೇವಳ ಪ್ರವೇಶ ಮಾಡಿದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಚಿತ ಪಡಿಸಿದ್ದಾರೆ. ಈ ಹಿಂದೆ ಸರಿಯಾದ ಭದ್ರತೆ ಇಲ್ಲದೆ ಅವರ ಪ್ರಯತ್ನ ವಿಫಲವಾಗಿತ್ತು. ಆದರೆ ಅವರಿಗೆ ಭದ್ರತೆ ಒದಗಿಸುವುದು ಪೊಲೀಸರ ಕರ್ತವ್ಯ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಹಿಳೆಯರ ಪ್ರವೇಶದ ನಂತರ ದೇಗುಲಕ್ಕೆ ಬಾಗಿಲು
ಯಾವಾಗ ಮಹಿಳೆಯರು ದೇವಳ ಪ್ರವೇಶ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಖಚಿತಪಡಿಸಿದರೋ ಆ ಕೂಡಲೇ ದೇಗುಲದ ಬಾಗಿಲು ಮುಚ್ಚಿ, ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಅದೆಲ್ಲ ಪೂರ್ಣಗೊಂಡ ನಂತರ ಬಾಗಿಲು ತೆರೆಯಲಾಗಿದೆ. ದೇಗುಲದ ಬಾಗಿಲನ್ನು ಮುಚ್ಚಿದ ತಂತ್ರಿಗಳ (ಅರ್ಚಕರ) ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕೆಲ ಗಂಟೆಗಳ ನಂತರ ತಿರುವಾಂಕೂರ್ ದೇವಸ್ವ ಮಂಡಳಿ ಹೇಳಿದೆ.
ದೇವಾಲಯಗಳಿಗೆ ಹಣ ಹಾಕದಂತೆ ಮನವಿ
ನಮಗೆ ದೇವಳ ಮುಚ್ಚುವ ನಿರ್ಧಾರದ ಬಗ್ಗೆ ಗೊತ್ತಿರಲಿಲ್ಲ. ಆದರೂ ಈ ಬಗ್ಗೆ ವಿವರಣೆ ಕೇಳುತ್ತೇವೆ ಎಂದು ಮಂಡಳಿ ಸದಸ್ಯ ಎನ್. ವಿಜಯ್ ಕುಮಾರ್ ಹೇಳಿದ್ದಾರೆ. ಇನ್ನು ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟವಾದ ಶಬರಿಮಲೆ ಕರ್ಮ ಸಮಿತಿಯಿಂದ ಗುರುವಾರ ಕೇರಳ ಬಂದ್ ಗೆ ಕರೆ ನೀಡಲಾಗಿದೆ. ಶಬರಿಮಲೆ ಸೇರಿದಂತೆ ಯಾವ ದೇವಾಲಯಕ್ಕೂ ಹಣಕಾಸಿನ ದೇಣಿಗೆ ನೀಡದಂತೆ ಭಕ್ತರನ್ನು ಮನವಿ ಮಾಡಲಾಗಿದೆ.